ಸಾರಾಂಶ
ಹಲವಾರು ವರ್ಷಗಳಿಂದ ಹಲವು ಸಮಸ್ಯೆಗಳಿಂದ ನಿವೇಶನ ಹಂಚಿಕೆ ನನೆಗುದಿಗೆ ಬಿದ್ದಿತ್ತು. ಬಡವರಿಗೆ ಈಗ ನಿವೇಶನ ಹಂಚಿಕೆ ಮಾಡುವ ಕಾಲ ಇಂದು ಕೂಡಿ ಬಂದಿದೆ.ಆದಷ್ಟು ಬೇಗನೆ ಈ ಪ್ರದೇಶಕ್ಕೆ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ದಿಪಡಿಸಲಾಗುವುದು
ಗದಗ: ಕಳೆದ 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿಯ ಮಾರುತಿ ನಗರದಲ್ಲಿಯ ರಿ.ಸ ನಂ 294/4 ರ ಜಮೀನಿನಲ್ಲಿ ರಚನೆ ಮಾಡಿದ 30*40 ರ ಅಳತೆಯ ಆಶ್ರಯ ಯೋಜನೆಯ ನಿವೇಶನಗಳನ್ನು ಸಮೀಪದ ಲಕ್ಕುಂಡಿ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು.
ಫಲಾನುಭವಿಗಳ ನಿವೇಶನದ ಮೇಲೆ ನಿಂತು ಜಿಪಿಎಸ್ ಭಾವಚಿತ್ರ ತೆಗೆಯಲಾಯಿತು.ನಿವೇಶನ ಹಸ್ತಾಂತರ ಮಾಡಿದ ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಹಲವಾರು ವರ್ಷಗಳಿಂದ ಹಲವು ಸಮಸ್ಯೆಗಳಿಂದ ನಿವೇಶನ ಹಂಚಿಕೆ ನನೆಗುದಿಗೆ ಬಿದ್ದಿತ್ತು. ಬಡವರಿಗೆ ಈಗ ನಿವೇಶನ ಹಂಚಿಕೆ ಮಾಡುವ ಕಾಲ ಇಂದು ಕೂಡಿ ಬಂದಿದೆ.ಆದಷ್ಟು ಬೇಗನೆ ಈ ಪ್ರದೇಶಕ್ಕೆ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ದಿಪಡಿಸಲಾಗುವುದು. ಫಲಾನುಭವಿಗಳು ಸಹಕರಿಸಬೇಕೆಂದ ಅವರು, ಈ ನಿವೇಶನ ಒದಗಿಸಲು ಕಳೆದ 20 ವರ್ಷಗಳಿಂದ ಶ್ರಮಿಸಿದ ಸಚಿವರು, ಶಾಸಕರು, ಜಿಪಂ, ತಾಪಂ ಮಾಜಿ ಸದಸ್ಯರು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ 38 ಹಕ್ಕು ಪತ್ರ ವಿತರಿಸಲಾಯಿತು.ಫಲಾನುಭವಿ ನಾಗಮ್ಮ ಹಾಲಿನವರ ಮಾತನಾಡಿ, ಕಳೆದ ಐದು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಕೆ ಇಂದು ಯಶ ಸಿಕ್ಕಿದ್ದು ಸಂತಸ ತಂದಿದೆ. ಇನ್ನೂ ಉಳಿದ ಕೆಲವು ಫಲಾನುಭವಿಗಳಿಗೆ ಬೇಗನೆ ಹಕ್ಕು ಪತ್ರ ದೊರಕಿಸಿಕೊಡಬೇಕು. ಹಾಗೂ ಬೇಗನೆ ರಸ್ತೆ, ಕುಡಿವ ನೀರು, ವಿದ್ಯುತ್ ಒದಗಿಸುವ ಕಾಮಗಾರಿ ಮಾಡಬೇಕೆಂದು ವಿನಂತಿಸಿಕೊಂಡರು. ಗ್ರಾಪಂ ಸದಸ್ಯರಾದ ಪೀರಸಾಬ್ ನದಾಫ, ಕುಬೇರಪ್ಪ ಬೆಂತೂರ, ಲಲಿತಾ ಗದಗಿನ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಪಿ.ಡಿ.ಒ ರಾಜಕುಮಾರ ಭಜಂತ್ರಿ,ಕಾರ್ಯದರ್ಶಿ ಪ್ರದೀಪ ಆಲೂರ,ಲೆಕ್ಕ ಸಹಾಯಕ ತುಕಾರಾಮ ಹುಲಗಣ್ಣವರ, ತಾಪಂ ವಸತಿ ನೋಡೆಲ್ ಅಧಿಕಾರಿ ಹನುಮಂತಪ್ಪ ದಾಸರ ಗ್ರಾಪಂ ಸದಸ್ಯರು ಹಾಜರಿದ್ದರು.