ಸಾರಾಂಶ
ಕನ್ನಡಪ್ರಭ ವಾರ್ತೆ ಬ್ರಹ್ಮಾವರಇಲ್ಲಿನ ಹಂಗಾರಕಟ್ಟೆಯ ಬಾಳ್ಕುದ್ರು ಕೈಂಡ್ ಹಾರ್ಟ್ ಟ್ರಸ್ಟ್ ಹಾಗೂ ಬ್ರಹ್ಮಾವರ ರೋಟರಿ ಕ್ಲಬ್ ಆಶ್ರಯದಲ್ಲಿ ಬುಧವಾರ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ರೋಟರಿ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ. ಸುನೀಲ್ ಡಿಸಿಲ್ವಾ ಮಾತನಾಡಿ, ದೂರದೃಷ್ಟಿಯೊಂದಿಗೆ ಗುರಿ ಮತ್ತು ಉದ್ದೇಶ ಹೊಂದಿರುವ ಸಂಸ್ಥೆ ಧೀರ್ಘ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದು ಶ್ಲಾಘಿಸಿದರು.ನಾವು ನೀಡುವ ಸೇವೆ ಇನ್ನೊಬ್ಬರ ಹೃದಯವನ್ನು ಮುಟ್ಟುವಂತದ್ದಾಗಿರಬೇಕು. ನಿರಂತರ ಉತ್ತಮ ಕಾರ್ಯಗಳ ಮೂಲಕ ನಾವು ಸಮಾಜದಲ್ಲಿ ಶಾಶ್ವತವಾದ ಹೆಸರು ಮಾಡಬೇಕು. ಇನ್ನೊಬ್ಬರಿಗೆ ಮುಕ್ತ ಹೃದಯದಿಂದ ಮಾಡಿದ ಸೇವೆಗೆ ಭಗವಂತನ ಪ್ರತಿಫಲ ಸದಾ ಇದೆ. ಹಸಿದವನಿಗೆ ಕೊಟ್ಟ ರೊಟ್ಟಿಯ ಸಹಾಯ ದೇವರಿಗೆ ಸದಾ ಪ್ರೀಯವಾದುದು. ಆದ್ದರಿಂದ ನಮ್ಮ ಸೇವೆಯನ್ನು ಪ್ರೀತಿಯಿಂದ ಮಾಡೋಣ ಎಂದರು.
ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ.ಮಥಾಯಸ್ ಡಾಯಸ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಕೇವಲ ಹೆತ್ತವರಿಗೆ, ಮಾತ್ರವಲ್ಲದೆ ಸಮಾಜಕ್ಕೂ ಗೌರವ ತಂದು ಕೊಡುತ್ತದೆ. ವಿದ್ಯಾರ್ಥಿಗಳ ಪರಿಶ್ರಮದಲ್ಲಿ ಹೆತ್ತವರ ಪಾತ್ರ ಮಹತ್ತರವಾದುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 10 ಪ್ರೌಢ ಶಾಲೆಗಳ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕೈಂಡ್ ಹಾರ್ಟ್ ಟ್ರಸ್ಟ್ ಅಧ್ಯಕ್ಷ ಹೆನ್ರಿ ಲೂವಿಸ್ ಪ್ರಾಸ್ತಾವಿಕ ಮಾತನಾಡಿ, ಮುಂದಿನ ದಿನಗಳಗಲ್ಲಿ ವೃದ್ದರಿಗಾಗಿ ವೃದ್ಧಾಶ್ರಮ ನಿರ್ಮಿಸುವ ಚಿಂತನೆ ಇದೆ ಎಂದರು.ರೋಟರಿ ಕ್ಲಬ್ ಅಧ್ಯಕ್ಷ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿಎಚ್ಎಫ್ ವಾಲ್ಟರ್ ಸಿರಿಲ್ ಪಿಂಟೊ, ಜಗದೀಶ್ ಕೆಮ್ಮಣ್ಣು, ಶ್ರೀಧರ್ ಶೆಟ್ಟಿ, ಹರೀಶ್ ಕುಂದರ್, ರೆಕ್ಸನ್ ಮೋನಿಸ್, ಚೇತನಾ ಪ್ರೌಢ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ಮತ್ತಿತರರಿದ್ದರು.ಡೆನಿಸ್ ರೊಡ್ರಿಗಸ್ ವಿದ್ಯಾರ್ಥಿಗಳನ್ನು ಪರಿಚಯಿಸಿದರು, ಪ್ರಶಾಂತ್ ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು. ರೂಬಿನಾ ರೊಡ್ರಿಗಸ್ ಸ್ವಾಗತಿಸಿದರು. ಸುಜಾತಾ ಅಂದ್ರಾದೆ ವಂದಿಸಿದರು.