ಸಾರಾಂಶ
ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಅಂಜನಾದ್ರಿಯ ಬೆಟ್ಟದ ಸುತ್ತಲು, ಹನುಮನಹಳ್ಳಿ, ಆನೆಗೊಂದಿ, ಕಡೆಬಾಗಿಲು ಸೇರಿದಂತೆ ವಿವಿಧೆಡೆ ಗುರುತಿಸಿರುವ ಪಾರ್ಕಿಂಗ್ ಸ್ಥಳಗಳು ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಸೂಚನಾ ಫಲಕಗಳನ್ನು ಹಾಕಿರುವುದನ್ನು ವೀಕ್ಷಿಸಿದರು.
ಕೊಪ್ಪಳ: ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಜಿಲ್ಲಾಧಿಕಾರಿ ನಳಿನ್ ಅತುಲ್ ಶುಕ್ರವಾರ ಭೇಟಿ ನೀಡಿ ಹನುಮಮಾಲಾ ವಿಸರ್ಜನೆಯ ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದರು.
ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಅಂಜನಾದ್ರಿಯ ಬೆಟ್ಟದ ಸುತ್ತಲು, ಹನುಮನಹಳ್ಳಿ, ಆನೆಗೊಂದಿ, ಕಡೆಬಾಗಿಲು ಸೇರಿದಂತೆ ವಿವಿಧೆಡೆ ಗುರುತಿಸಿರುವ ಪಾರ್ಕಿಂಗ್ ಸ್ಥಳಗಳು ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಸೂಚನಾ ಫಲಕಗಳನ್ನು ಹಾಕಿರುವುದನ್ನು ವೀಕ್ಷಿಸಿದರು.ಅಂಜನಾದ್ರಿ ಬೆಟ್ಟದ ಸುತ್ತ ವಿವಿಧೆಡೆ ಅಳವಡಿಸಿರುವ ಕುಡಿಯುವ ನೀರಿನ ಪಾಯಿಂಟ್, ತಾತ್ಕಾಲಿಕ ಶೌಚಗೃಹ ಸೇರಿದಂತೆ ಅಂತಿಮ ಹಂತದಲ್ಲಿದ್ದ ನಾನಾ ಮೂಲ ಸೌಕರ್ಯದ ಸಿದ್ಧತೆಯ ಬಗ್ಗೆ ಮಾಹಿತಿ ಪಡೆದರು.ವೇದಪಾಠ ಶಾಲೆಯ ಹತ್ತಿರ ಪ್ರಸಾದ ಸಿದ್ಧಪಡಿಸುವ ಸ್ಥಳ ಹಾಗೂ ಅಡುಗೆ ಸಿದ್ಧಪಡಿಸಲು ಬೇಕಾದ ದವಸ ಧಾನ್ಯ ಮತ್ತು ಇನ್ನಿತರ ಪರಿಕರಗಳ ಸಿದ್ಧತೆಯ ಬಗ್ಗೆ ಸಹ ಜಿಲ್ಲಾಧಿಕಾರಿ ಮಾಹಿತಿ ಪಡೆದರು.ಅಂಜನಾದ್ರಿಯ ಬೆಟ್ಟದ ಕೆಳಗಿನ ಸಹಾಯವಾಣಿ ಕೇಂದ್ರದ ಹತ್ತಿರ ಮತ್ತೊಮ್ಮೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ, ಸಮಿತಿವಾರು ಪರಿಶೀಲಿಸಿ ಎಲ್ಲ ಸಿದ್ಧತೆಯ ಬಗ್ಗೆ ಖಚಿತಪಡಿಸಿಕೊಂಡು ಬಾಕಿ ಯಾವುದಾದರೂ ಕೆಲಸ ಉಳಿದಿದ್ದಲ್ಲಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ತಹಸೀಲ್ದಾರರಾದ ವಿಶ್ವನಾಥ ಮುರಡಿ, ಶ್ರುತಿ, ತಾಪಂ ಇಒ ಲಕ್ಷ್ಮೀದೇವಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಇದ್ದರು.