ಬಿ.ಎಸ್. ಸುನೀಲ್‌

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಹನುಮಂತನಗರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಶ್ರೀಆತ್ಮಲಿಂಗೇಶ್ವರ ಭಾರೀ ದನಗಳ ಜಾತ್ರೆ ಮತ್ತು ವೈಭವದ ರಥೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಪೂರ್ವಭಾವಿಯಾಗಿ ದನಗಳ ಜಾತ್ರೆಗೆ ಚಾಲನೆ ನೀಡಲಾಗಿದೆ.

ಫೆ.15ರಂದು ಮಹಾಶಿವರಾತ್ರಿಯ ಅಂಗವಾಗಿ ಬೆಳಗ್ಗೆ 7ಕ್ಕೆ ಅನುಘ್ನೆ ಶ್ರೀಮಹಾ ಗಣಪತಿ ಪೂಜೆ, ಪಂಚಬ್ರಹ್ಮ, ಏಕದಶರುದ್ರ ಮತ್ತು ಪ್ರಧಾನ ಕಳಸ ಸ್ಥಾಪನಾದಿ ಅರ್ಚನೆ ಮತ್ತು ಆವಾಹಿತ ಸರ್ವ ದೇವತೆಗಳಿಗೆ ಹವಿಸ್ಸು, ಮಹಾ ರುದ್ರಹೋಮ, ಶ್ರೀ ಆತ್ಮಲಿಂಗೇಶ್ವರಸ್ವಾಮಿಗೆ ಪಂಚಾಮೃತಾಭಿಷೇಕ ಮತ್ತು ಪೂಜಾ ಅಲಂಕಾರ, ಬೆಳಗ್ಗೆ 10.30 ರಿಂದ 12.30 ರವರೆಗೆ ರುದ್ರಹೋಮ, ಮಹಾ ಮಂಗಳಾರತಿ ನಂತರ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಅದೇ ದಿನ ಸಂಜೆ 4 ರಿಂದ 6 ರವರೆಗೆ ಟಿ.ನರಸಿಪುರ ತಾಲೂಕಿನ ಚನ್ನಾಜಮ್ಮ ಮತ್ತು ತಂಡದಿಂದ ಸೋಬಾನೆ ಪದಗಳು, ಭಾರತೀನಗರದ ಪ್ರಜಾಪಿತ ಬಹ್ಮಕುಮಾರಿ ಆಶ್ರಮದ ಗೌರಿಯಕ್ಕ ಅವರಿಂದ ಸಂಜೆ 6ರಿಂದ 7 ರವೆರೆಗೆ ಪ್ರವಚನ, ಬೆಂಗಳೂರಿನ ಶ್ರೀದುರ್ಗಾ ಆರ್ಟ್ಸ್ ಅಕಾಡೆಮಿಯಿಂದ ಭರತ ನಾಟ್ಯ, ಮೈಸೂರಿನ ಸಂಜೀವಿನಿ ಭಜನಾ ಮಂಡಳಿಯಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ದುರ್ಗಾ ಮಹಿಳಾ ಕಲಾ ತಂಡದಿಂದ ದೊಣ್ಣೆವರಸೆ, ದೊಡ್ಡರಸಿನಕೆರೆ ಶ್ರೀ ಕಾಲಭೈರವೇಶ್ವರ ಜನಪದ ಯುವಕ ಕಲಾ ತಂಡ. ಕರಡಕೆರೆ ಮಾರುತಿ ಯುವಕರ ಸಂಘ, ತಳಗವಾದಿ ಶ್ರೀ ಚೌಡೇಶ್ವರಿ ಕಲಾ ಸಂಘ, ದೇವಿಪುರದ ಶ್ರೀ ನೇತಾಜಿ ಕಲಾ ಮತ್ತು ಸಾಂಸ್ಕೃತಿಕ ಕ್ರೀಡಾ ಬಳಗ, ಕರಡಕೆರೆ ಶ್ರೀ ಮಾರುತಿ ಯುವಕರ ಸಂಘದಿಂದ ಕೋಲಾಟ ಮತ್ತು ಮುಟ್ಟನಹಳ್ಳಿ, ಕರಡಕೆರೆ, ಗೌಡಯ್ಯನದೊಡ್ಡಿ, ಅಖಂಡ ಭಜನೆ ಜರುಗಲಿದೆ.


ಫೆ.17ರಂದು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ವಿಶೇಷ ಪೂಜೆ, ಮದ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮದ್ಯಾಹ್ನ 2 ಗಂಟೆಗೆ ಚತುರ್ವೀಧಿಗಳಲ್ಲಿ ರಥೋತ್ಸವ ಜರುಗಲಿದ್ದು ಇದರ ಜತೆ ಕೆ.ಶೆಟ್ಟಹಳ್ಳಿ ಶ್ರೀಭೈರವೇಶ್ವರ ಸ್ವಾಮಿ ಮತ್ತು ಮಾರಮ್ಮ, ಬಿದರಹಳ್ಳಿ ಶ್ರೀ ಕಬ್ಬಾಳಮ್ಮ, ಮಾದರಹಳ್ಳಿ ಶ್ರೀಕಾಳಮ್ಮ, ಶ್ರೀದೇವಮ್ಮ ಹಾಗೂ ದೇಶಿ ಲಿಂಗಪ್ಪ ವಾಹನ, ಚಿಕ್ಕರಸಿನಕೆರೆ ಶ್ರೀ ಕಾಲಬೈರವೇಶ್ವರ ಸ್ವಾಮಿ ಪೂಜೆ ಮತ್ತು ಬಿರುದುಗಳು, ಅರೇಚಾಕನಹಳ್ಳಿ ಶ್ರೀ ಶಂಭುಲಿಂಗೇಶ್ವರ, ಕರಡಕೆರೆ ಶ್ರೀ ಆಂಜನೇಯ ಸ್ವಾಮಿಯ ಬಿರುದುಗಳು ಮತ್ತು ವೀರಗಾಸೆ ಕುಣಿತ, ಡೊಳ್ಳು ಕುಣಿತ ಪಾಲ್ಗೊಳ್ಳಲಿವೆ.

ಅದೇ ದಿನ ಸಂಜೆ 4.30 ಕ್ಕೆ ಎಪಿಎಂಸಿ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು.ಮಾ.18ರಂದು ತೆಪ್ಪೋತ್ಸವ

ಮಾ.18ರಂದು ದೇವಾಲಯ ಆವರಣದಲ್ಲಿರುವ ಪಾವನಗಂಗಾದಲ್ಲಿ ಸಂಜೆ 6.50 ರಿಂದ ರಾತ್ರಿ 8 ಗಂಟೆಯವರೆಗೆ ತೆಪ್ಪೋತ್ಸವ, 8.15 ಕ್ಕೆ ದೇವಾಲಯ ಪ್ರಾಂಗಣದಲ್ಲಿ ಶಯನೋತ್ಸವ ದಾರ್ಮಿಕ ಕಾರ್ಯಕ್ರಮಗಳು ಮತ್ತು ಭರತನಾಟ್ಯ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಶ್ರೀ ಆತ್ಮಲಿಂಗೇಶ್ವರ ದೆೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದ್ದಾರೆ.

ನನ್ನ ತಾತ ಜಿ.ಮಾದೇಗೌಡ ಅವರು ದೈವ ಭಕ್ತರಾಗಿದ್ದು ಅವರ ಕನಸಿನಲ್ಲಿ ಕಾಣಿಸಿದ್ದೆ ಆತ್ಮಲಿಂಗೇಶ್ವರ ಅದನ್ನು ಗುಡ್ಡದಲ್ಲಿ ಪ್ರತಿಷ್ಠಾಪಿಸಿ ಒಂದು ಉತ್ತಮ ಧಾರ್ಮಿಕ ಕ್ಷೇತ್ರ ಮಾಡಿದ್ದಾರೆ. ಧನಗಳ ಜಾತ್ರೆಗಂತೂ ಉತ್ತಮ ಪ್ರತಿಕ್ರಿಯೆ ಒರತಿದ್ದು ಹೊರ ಜಿಲ್ಲೆಗಳಿಂದ ಸಹ ಎತ್ತುಗಳು ಆಗಮಿಸುತಿದ್ದು, ಕ್ಷೇತ್ರಕ್ಕೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಶಿವರಾತ್ರಿಯಲ್ಲಿ ಸಾವಿರಾರು ಭಕ್ತರು ಆಗಮಿಸಲಿದ್ದು ಅವರಿಗೆ ಮೂಲ ಸೌಕರ್ಯ ಒದಗಿಸಲಾಗಿದೆ.

- ಆಶಯ್ ಮಧು, ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ, ಹನುಮಂತನಗರ