ಶಿಗ್ಗಾಂವಿ: ಸಂತೋಷವೇ ಜೀವನದ ನಿಜವಾದ ಕಿರೀಟ, ಮನುಷ್ಯ ಈ ಜಗತನ್ನು ಬಿಟ್ಟು ಹೋಗುವಾಗ ಯಾವುದೇ ಆಸ್ತಿ ಅಂತಸ್ತು, ಐಶ್ವರ್ಯ ಬಾರದೆ ಕೇವಲ ನಾವು ಮಾಡಿದ ಪುಣ್ಯದ ಕೆಲಸ ಮಾತ್ರ ಉಳಿಯಲು ಸಾಧ್ಯ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ದುಂಡಶಿ ಗ್ರಾಮದ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೀರ್ತಿ, ಕಿರೀಟ, ಖುರ್ಚ ಇದು ಯಾವುದೇ ಶಾಶ್ವತವಾಗಿ ಒಬ್ಬರ ಬಳಿ ಉಳಿಯದೆ ಪರಸ್ಪರ ಹಸ್ತಾಂತರವಾಗುತ್ತದೆ. ಅಂದು ವಜ್ರ ವಡವೆಗಳಿಂದ ಮುತ್ತು ರತ್ನಗಳಿಂದ ಮೆರೆದ ಹಂಪಿ ಇಂದು ಹಾಳು ಹಂಪಿಯಾಗಿ ಉಳಿದಿದೆ. ಮನುಷ್ಯ ಜೀವನದ ವಿರಳತೆ ಬಗ್ಗೆ ಅರಿತು ಬಾಳಬೇಕು ಎಂದರು.ಸಂಪತ್ತು ಎಷ್ಟು ಗಳಿಸಿದರು ಅದು ನಮ್ಮ ಜೊತೆಗೆ ಬಾರದೆ ಪರರ ಸ್ವತ್ತಾಗುತ್ತೆ ಎಂದರು, ಮನುಷ್ಯ ಮಾನಸಿಕ ಒತ್ತಡ, ದೂರಾಲೋಚನೆ, ವಾಸ್ತವಿಕತೆಯ ಅರಿವಿನೊಂದಿಗೆ ಬದುಕಬೇಕು ಅಂದಾಗ ಜೀವನ ಪಾವನವಾಗುತ್ತದೆ.ದುಂಡಶಿ ವಿರಕ್ತ ಮಠದ ಕುಮಾರ ಮಹಾಸ್ವಾಮಿ ಸಾನ್ನಿಧ್ಯವಹಿಸಿದ್ದರು. ಊರಿನ ಮುಖಂಡರಾದ ಶಿವನಗೌಡ ಪಾಟೀಲ, ಸಂತೋಷ ಹುಣಶ್ಯಾಳ, ಸುನಿಲ್ ಅರೇಕೊಪ್ಪ, ಪ್ರಶಾಂತ ಮಹಾಜನಶೆಟ್ರ, ತಿಪ್ಪಣ್ಣ ಸಾತಣ್ಣವರ, ಜಯದೇವ ಅಗಡಿ, ಅಜ್ಜಪ್ಪ ಗುಳೇದ, ಪಾರಿಶ್ವನಾಥ ಬಾಳಂಬಿಡ ಸೇರಿದಂತೆ ಗ್ರಾಮದ ಹಲವಾರು ಮುಖಂಡರುಗಳು ಇದ್ದರು.