ಕನ್ನಡಪ್ರಭ ವಾರ್ತೆ ಅರಸೀಕೆರೆ

ಬಾಣಾವರ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಪದಾಧಿಕಾರಿಗಳು ಹಾಗೂ ಮುಸ್ಲಿಂ ಬಾಂಧವರು, ಕೆ ಎಂ ಶಿವಲಿಂಗೇಗೌಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಎಂ. ಸಮೀವುಲ್ಲಾ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ನಿವಾಸಗಳಿಗೆ ಭೇಟಿ ನೀಡಿ ಕೇಕ್ ಕತ್ತರಿಸಿ, ಶಾಲು, ಹಾರ ಹಾಕಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷ ಸಯ್ಯದ್ ರಹೀಂಸಾಬ್, ಕೆ.ಎಂ. ಶಿವಲಿಂಗೇಗೌಡರು ಶಾಸಕರಾಗಿ ಆಯ್ಕೆಯಾದ ನಂತರ ಅರಸೀಕೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತಿವೆ ಎಂದು ಹೇಳಿದರು. ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ಷೇತ್ರವು ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದು, ವಿವಿಧ ಸಮುದಾಯಗಳಿಗೆ ಸಮುದಾಯ ಭವನಗಳನ್ನು ನಿರ್ಮಿಸಿ ಕೊಡುವ ಮೂಲಕ ಶಾಸಕರು ಸಮಾನತೆಯ ಸಂದೇಶ ನೀಡಿದ್ದಾರೆ ಎಂದು ಪ್ರಶಂಸಿಸಿದರು. ಹಾಗೆಯೇ, ಕೆರೆಗಳಿಗೆ ನೀರು ಹರಿಸುವ ಯೋಜನೆಗಳ ಮೂಲಕ ಬರಪೀಡಿತ ಪ್ರದೇಶವಾಗಿದ್ದ ಅರಸೀಕೆರೆಯನ್ನು ಸಮೃದ್ಧಿಯ ನಾಡಾಗಿ ರೂಪಿಸುವ ಕಾರ್ಯ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರ ದೊರೆತು ಸಚಿವ ಸ್ಥಾನವೂ ಲಭಿಸಲಿ ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ, ಸುನ್ನಿ ಮುಸ್ಲಿಂ ಜಮಾತ್ ಕಮಿಟಿಗೆ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯದ್ ರಹೀಂಸಾಬ್ ಹಾಗೂ ಕಾರ್ಯದರ್ಶಿ ಶರ್ಫಾನ್ ಸೇರಿದಂತೆ ಪದಾಧಿಕಾರಿಗಳಾದ ಗೌಸ್ ಪೀರ್‌, ಸಮೀ, ಆದಿಲ್, ಪರ್ವೀಜ್, ವಸೀಮ್, ಇಮ್ರಾನ್, ಶಬ್ಬೀರ್ ಮತ್ತು ಇತರೆ ಸದಸ್ಯರನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡರು ಶಾಲು ಹಾರ ಹಾಕಿ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾತ್ ಕಮಿಟಿಯ ಮಾಜಿ ಅಧ್ಯಕ್ಷ ಕೆ.ಸಿ. ಖಾದರ್‌ ಭಾಷಾ, ಮುಖಂಡರಾದ ಶಫಿ ಅಹಮದ್ ಸಾಬ್, ಮಹಮ್ಮದ್ ಇಲಿಯಾಜ್ ಸಾಬ್, ವಕ್ ಬೋರ್ಡ್ ಮಾಜಿ ನಿರ್ದೇಶಕ ಆರಿಫ್ ಜಾನ್, ಅರಸೀಕೆರೆ ಆರೋಗ್ಯ ಸ್ಥಾಯಿ ಸಮಿತಿ ನಿರ್ದೇಶಕ ಮೊಹಮ್ಮದ್ ಇಮ್ರಾನ್ ದಸ್ತಗೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.