ಬೈಂದೂರು: ಕಳೆದ ಏಳು ವರ್ಷಗಳಿಂದ ಇಲ್ಲಿನ ನಡೂರು ಶ್ರೀವಾಣಿ ಪ್ರೌಢಶಾಲೆಯ ಕನ್ನಡ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುರೇಂದ್ರ ನಾಯ್ಕ್ ಅವರಿಗೆ ಕುಂದಾಪುರ ತಾಲೂಕಿನ ಕೊಡ್ಲಾಡಿಯಲ್ಲಿ ಯಕ್ಷಗಾನ ಕಲಾರಂಗದ ಮೂಲಕ ನಿರ್ಮಿಸಿದ ನೂತನ ಮನೆ ಶ್ರೀ ಬ್ರಹ್ಮಲಿಂಗೇಶ್ವರವನ್ನು ಪ್ರಾಯೋಜಕರಾದ ಬೆಂಗಳೂರಿನ ಎಸ್. ವೆಂಕಟೇಶ್- ನಂದಾ ದಂಪತಿ ಉದ್ಘಾಟಿಸಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್, ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸಗಳು ಅನ್ಯರ ಊಹೆಗೂ ನಿಲುಕದು. ಇಂತಹ ಕಾರ್ಯಗಳನ್ನು ಮಾಡುತ್ತಾ ಅದರಲ್ಲಿ ಎಷ್ಟು ಪರಿಣತರಾಗಿದ್ದಾರೆಂದರೆ ನಿರಂತರ ಹಲವು ಚಟುವಟಿಕೆಗಳೊಂದಿಗೆ ತಿಂಗಳಿಗೆರಡು ಮನೆ ಉದ್ಘಾಟಿಸುವುದು ಅವರಿಗೊಂದು ಸಂಗತಿಯೇ ಅಲ್ಲ. ಈ ಸಂಸ್ಥೆಯ ಕೆಲಸಗಳಿಗೆ ಕೈಜೋಡಿಸುತ್ತಾ ಅತ್ಯಂತ ಸಂತಸ ಅನುಭವಿಸುತ್ತಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಯಕ್ಷಗಾನ ಕಲಾರಂಗದ ಕೆಲಸ ಅನುಕರಿಸಲಾಗದು. ಪ್ರಪಂಚದಲ್ಲಿ ಇಂತಹ ಇನ್ನೊಂದು ಸಂಘಟನೆ ಇಲ್ಲ ಎಂಬುದು ನನ್ನ ಅಭಿಪ್ರಾಯ. ಸಮರ್ಥ ನಾಯಕತ್ವ ಅರ್ಪಣಾ ಮನೋಭಾವದ ಕಾರ್ಯಕರ್ತರ ಪಡೆ ಅಭಿನಂದನಾರ್ಹರು. ನನ್ನೊಂದಿಗೆ ಕೆಲಸ ಮಾಡುವ ಕಾರ್ಯಕರ್ತರಿಗೆ ಕಲಾರಂಗದ ಕಾರ್ಯ ವೈಖರಿಯನ್ನು ಉಲ್ಲೇಖಿಸುತ್ತಾ ಇರುತ್ತೇನೆ ಎಂದು ಹೇಳಿದರು.
ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಮಾರ್ಗದರ್ಶಕ ಪ್ರೊ. ಸಖಾರಾಮ ಸೋಮಯಾಜಿ ಮನೆ ಆರಂಭಿಸಿ ಕೈಸಾಗದೆ ಕಂಗಾಲಾಗಿ ಕುಳಿತ ಹೊತ್ತಿಗೆ ಸುರೇಂದ್ರ ನಾಯ್ಕರಿಗೆ ಕಲಾರಂಗವನ್ನು ತೋರಿಸಿದೆ. ಕಷ್ಟಕ್ಕೆ ಸ್ಪಂದಿಸುವ ಸಂಸ್ಥೆಯಿಂದ ನಿರ್ಮಾಣಗೊಂಡ ಮನೆ, ನೊಂದ ಶಿಕ್ಷಕರಿಗೊದಗಿದ ಮಹಾ ಭಾಗ್ಯ ಎಂದು ಅಭಿಪ್ರಾಯಪಟ್ಟರು.ಸುರೇಂದ್ರ ನಾಯ್ಕ ಮಾತನಾಡಿ, ಸಾಲ ಮಾಡಿ ಆಡಂಬರದ ಮನೆ ಕಟ್ಟಿ ಸಾಲ ತೀರಿಸಲಾಗದೆ ನಿತ್ಯ ಬೇಯುವುದಕ್ಕಿಂತ ನಮ್ಮ ಮಿತಿಯಲ್ಲಿ ಮನೆ ನಿರ್ಮಿಸಿ ಸುಖವಾಗಿರಬೇಕೆಂಬುದು ಕಲಾರಂಗ ನನಗೆ ಕಲಿಸಿದ ದೊಡ್ಡ ಪಾಠ. ದಾನಿಗಳಾದ ವೆಂಕಟೇಶ ದಂಪತಿಗಳಿಗೆ ನಮ್ಮ ಕುಟುಂಬ ಸದಾ ಋಣಿ, ಅವರೇ ನಮಗೆ ಪ್ರಾತಃ ಸ್ಮರಣೀಯರು ಎಂದರು.ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಆಡಳಿತಾಧಿಕಾರಿ ಎಂ. ವಿಶ್ವನಾಥ ಶೆಟ್ಟಿ, ಹ್ಯಾಪ್ಪಿ ವರ್ಲ್ಡ್ನ ಪ್ರವರ್ತಕ ಸಂತೋಷ್ ಹಾಜರಿದ್ದರು. ಸಂಸ್ಥೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.