ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಜು.16 ರಂದು ನಡೆಯಲಿರುವ ಎಂಡಿಎ ಮಾಜಿ ಅಧ್ಯಕ್ಷ ಹಾಗೂ ಉಪ್ಪಾರ ಸಮಾಜದ ಮುಖಂಡ ಎಚ್.ಎನ್. ವಿಜಯ್ ಅವರ ಜನ್ಮ ದಿನೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳಿಗೆ ಬೃಹತ್ ವೇದಿಕೆ ಸಿದ್ದಪಡಿಸಲಾಗುತ್ತಿದೆ.ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿನ ಹತ್ತು ಎಕರೆ ಪ್ರದೇಶದಲ್ಲಿ ಚಿತ್ರಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ನೇತೃತ್ವದಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಸಾಲಿಗ್ರಾಮ ತಾಲೂಕು ಕೇಂದ್ರದಿಂದ ಕಾರ್ಯಕ್ರಮ ನಡೆಯುವ ವೇದಿಕೆವರೆಗೂ ಪ್ಲೆಕ್ಸ್, ಕಟೌಟ್ ಹಾಗೂ ವಿವಿಧ ರೀತಿಯ ಚಿತ್ರ ವಿನ್ಯಾಸದ ಚಿತ್ತಾರಗಳ ಜೊತೆಗೆ ಹರದನಹಳ್ಳಿ ಗ್ರಾಮದ ಹೆಬ್ಬಾಗಿಲಿನಿಂದ ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.ಜನ್ಮ ದಿನೋತ್ಸವದ ಅಂಗವಾಗಿ ಜು. 15 ಮಂಗಳವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ನೇತ್ರದಾನ ಮತ್ತು ಕಣ್ಣಿನ ತಪಾಸಣಾ ಶಿಬಿರ ಸೇರಿದಂತೆ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸಿ, ಇದರೊಂದಿಗೆ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಎನ್. ವಿಜಯ್ ಸ್ನೇಹ ಬಳಗದ ಮಿರ್ಲೆ ರಾಜೀವ್ ತಿಳಿಸಿದರು.ಜು. 16ರಂದು ನಡೆಯುವ ಜನ್ಮ ದಿನೋತ್ಸವ ಸಮಾರಂಭಕ್ಕೆ ನಾಡಿನ ವಿವಿಧ ಮಠಾಧೀಶರು, ರಾಜಕೀಯ ನಾಯಕರು, ಉದ್ಯಮಿಗಳು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧಕರು ಸೇರಿದಂತೆ ಗಣ್ಯರು ಆಗಮಿಸುವುದರಿಂದ ಶನಿವಾರ ಸಾಲಿಗ್ರಾಮ ಪೊಲೀಸ್ ಇನ್ಸ್ ಪೆಕ್ಟರ್ ಶಶಿಕುಮಾರ್ ಸ್ಥಳ ಪರಿಶೀಲನೆ ನಡೆಸಿ, ಕಾರ್ಯಕ್ರಮದ ಸಂಘಟಕರಿಗೆ ಹಲವು ಸಲಹೆ ಸೂಚನೆ ನೀಡಿದರು.ಜು. 16ರ ಬೆಳಗ್ಗೆ 10ಕ್ಕೆ ಧರ್ಮಗುರುಗಳು ಮತ್ತು ಪ್ರತಿಭಾವಂತರ ಪುರಸ್ಕಾರದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಆನಂತರ ಎಚ್.ಎನ್. ವಿಜಯ್ ಅವರಿಗೆ ಸ್ನೇಹ ಬಳಗದಿಂದ ಜನ್ಮ ದಿನೋತ್ಸವದ ಶುಭಾಶಯ ಕೋರಿ ಆನಂತರ ಮಧ್ಯಾಹ್ನ 12ಕ್ಕೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ನೇತೃತ್ವದ ತಂಡದಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು, ಇದರೊಟ್ಟಿಗೆ ನಿರೂಪಕಿ ಅನುಶ್ರೀ ನೇತೃತ್ವದಲ್ಲಿ ಇತರ ರಸಮಂಜರಿ ಕಾರ್ಯಕ್ರಮ ನಡಯಲಿದೆ.ಭಗೀರಥ ಪೀಠದ ಗುರುಗಳಾದ ಪ್ರಸನ್ನಾನಂದ ಪುರಿ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಜಿ.ಡಿ. ಹರೀಶ್ ಗೌಡ, ಶಾಸಕ ಡಿ. ರವಿಶಂಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.ಮುಖಂಡರಾದ ಮಂಜು, ಗೋವಿಂದು, ನಿಂಗಪ್ಪ, ವೆಂಕಟೇಶ್, ರವಿಕುಮಾರ್, ಡಾಲ್ಪಿ, ಸತೀಶ್ ಇದ್ದರು.