ಸಾರಾಂಶ
ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಇಲ್ಲಿನ ರಾಜ್ಯ ಹೆದ್ದಾರಿ 105 ಅರಸೀಕೆರೆ-ಹಾಸನ ಮುಖ್ಯ ರಸ್ತೆಯ ಹಾರನಹಳ್ಳಿ ವ್ಯಾಪ್ತಿಯ ಆಂಜನೇಯ ದೇವಾಲಯದಿಂದ ಜಾವಗಲ್ ರಸ್ತೆವರೆಗೆ ಚತುಷ್ಪಥ ರಸ್ತೆಗಾಗಿ ಲೋಕೋಪಯೋಗಿ ಇಲಾಖೆಯಿಂದ 15 ತಿಂಗಳುಗಳ ಹಿಂದೆ ಆರಂಭವಾದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.ಕಾಮಗಾರಿ ನಿಂತ್ತಿದ್ದ ಪರಿ಼ಣಾಮ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಓಡಾಟ ನಡೆಸಲು ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಗುಂಡಿ, ರಸ್ತೆ ಇಕ್ಕೆಲಗಳಲ್ಲಿ ಹರಡಿದ ಕಲ್ಲುಗಳು ವಾಹನಗಳ ಚಕ್ರಕ್ಕೆ ಸಿಲುಕಿ ಸಿಡಿದು ಜನರಿಗೆ ತಗುಲಿ ಆಸ್ಪತ್ರೆ ಸೇರಿದ ಪ್ರಸಂಗಗಳು ನಡೆದಿದೆ. ರಸ್ತೆ ಗುಂಡಿ ಗೊಟರು ಬಿದ್ದಿದೆ. ವಾಹನ ಸವಾರರು ಉಸಿರು ಕಟ್ಟಿ ವಾಹನಗಳನ್ನು ಚಾಲನೆ ಮಾಡುವ ಸ್ಥಿತಿಯಾಗಿದೆ. ಈಗಲಾದರೂ ಉತ್ತಮ ಗುಣಮಟ್ಟದಲ್ಲಿ ಡಾಂಬರ್ ಹಾಕಿ ಉತ್ತಮ ರಸ್ತೆಯ ಕಾಮಗಾರಿ ಮಾಡಲಿ. ಗುಣಮಟ್ಟದ ಲೈಟುಗಳನ್ನು ಅಳವಡಿಸಲಿ. ಗುತ್ತಿನಕೆರೆ ಹೋಗುವ ಸರ್ಕಲ್ ಜಾವಗಲ್ ತಿರುವು ಸರ್ಕಲ್ಗಳನ್ನು ಅಗಲ ಮಾಡಲಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜನ ಸ್ವಾಮಿ ಆಗ್ರಹಿಸಿದ್ದಾರೆ.
ರಾಜ್ಯ ಹೆದ್ದಾರಿ ಧೂಳಿನ ರಹದಾರಿ:ರಸ್ತೆ ಇಕ್ಕೆಲಗಳಲ್ಲಿ ವಾಣಿಜ್ಯ ಸಂಕೀರ್ಣ ವಾಸದ ಮನೆಗಳಿದ್ದು ರಸ್ತೆ ಕಾಮಗಾರಿ ವಿಳಂಬದಿಂದ ಮನೆಗಳು ಧೂಳು ಮಯವಾಗಿವೆ. ಉಸಿರು ಕಟ್ಟಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಪಕ್ಕದ ಅಗಂಡಿಗಳಲ್ಲಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ರಸ್ತೆಯಲ್ಲಿ ಹರಡಿದ ಕಲ್ಲು ವಾಹನ ಚಕ್ರಕ್ಕೆ ಸಿಲುಕಿ ಸಿಡಿದು ಕೆಲವರು ಗಾಯಾಳುಗಳಾಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ರಸ್ತೆ ವಿಭಜಕ ಅಳವಡಿಸಿದ್ದು ತಿರುಗು ರಸ್ತೆ ಮಧ್ಯೆ ಅಗೆದು ಬಿಟ್ಟಿದು ವಾಹನ ಚಾಲಕರು ವಾಹನಗಳನ್ನು ತಿರುಗಿಸಲು ಕಷ್ಟಪಡುತ್ತಿದ್ದು ನಿತ್ಯ ಪರದಾಟ ಪಡುತ್ತಿದ್ದಾರೆ.ತಕ್ಷಣ ಲೋಕೋಪಯೋಗಿ ಅಧಿಕಾರಿಗಳು ಹಿಂದೆ ತಿರುಗುತ್ತಿದ್ದ ಜಾಗದಲ್ಲಿ ವಿಭಕಗಳನ್ನು ಸರಿಮಾಡಿ ತಕ್ಷಣ ಜಾವಗಲ್ ಬಸ್ಸುಗಳನ್ನು ನಿಲ್ದಾಣಕ್ಕೆ ಬರುವಂತೆ ಮಾಡಬೇಕು ಹಾಗೂ ತ್ವರಿತ ಗತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಮುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.