ಮತಾಂತರಕ್ಕೆ ಕಿರುಕುಳ, ಠಾಣೆ ಮೆಟ್ಟಿಲೇರಿದ ಮಹಿಳೆ

| Published : Jul 27 2024, 12:49 AM IST

ಸಾರಾಂಶ

2017 ಅಕ್ಟೋಬರ್ ತಿಂಗಳಲ್ಲಿ ಒತ್ತಾಯ ಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಿ ಮದುವೆ ಮಾಡಿಕೊಂಡಿದ್ದನು. ನಂತರದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ಸಂತ್ರಸ್ತೆ ಮಹಿಳೆಗೆ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ನೀಡಿದ್ದಾನೆ.

ಕಲಘಟಗಿ:

ತಮ್ಮ ಧರ್ಮಕ್ಕೆ ಮತಾಂತರ ಆಗಬೇಕೆಂದು ಕಿರುಕುಳ ನೀಡುತ್ತಿರುವ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಮಹಿಳೆಯೊಬ್ಬರು ಶ್ರೀರಾಮಸೇನೆ ಕಾರ್ಯಕರ್ತರೊಂದಿಗೆ ಶುಕ್ರವಾರ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಕಲಘಟಗಿ ಪಟ್ಟಣದಲ್ಲಿ ನಡೆದಿದೆ.

ಬೆಂಗಳೂರು ಕನಕನಗರ ನಿವಾಸಿ ಮುಜಾಹೀದ್‌ಖಾನ್‌ ಕೆ. (48) ಎಂಬಾತನು ಕಲಘಟಗಿಯ ಅಶ್ವಿನಿ ಪದ್ಮರಾಜ ಜೈನ್ (33) ಎಂಬುವರಿಗೆ ಮತಾಂತರದ ಒತ್ತಡದ ಜತೆಗೆ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಲಾಗಿದೆ.

2017 ಅಕ್ಟೋಬರ್ ತಿಂಗಳಲ್ಲಿ ಒತ್ತಾಯ ಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಿ ಮದುವೆ ಮಾಡಿಕೊಂಡಿದ್ದನು. ನಂತರದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ಸಂತ್ರಸ್ತೆ ಮಹಿಳೆಗೆ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ನೀಡಿದ್ದಾನೆ. ಮನನೊಂದ ಮಹಿಳೆಯು 2024ರ ಜೂ. 10ರಂದು ಕಲಘಟಗಿ ನ್ಯಾಯಾಲಯ ಮೆಟ್ಟಿಲೇರಿದ್ದಳು.

ಇದರಿಂದ ನ್ಯಾಯಾಲಯ ಆವರಣ ಸೇರಿದಂತೆ ಮಹಿಳೆಯ ಮನೆಗೆ ನುಗ್ಗಿ ಜೀವಬೆದರಿಕೆ ಹಾಕಿದ್ದ ಮುಜಾಹೀದ್‌ಖಾನ್‌ ವಿರುದ್ಧ ಈಗ ಶ್ರೀರಾಮಸೇನೆ ಸಹಾಯ ಕೇಳಿರುವ ಮಹಿಳೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.