ಜೀವನದಲ್ಲಿ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿಯನ್ನು ಬಿಟ್ಟರೆ ಬೇರೊಂದು ಶಾರ್ಟ್ಕಟ್ ಇಲ್ಲ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಉಡುಪಿ: ಜೀವನದಲ್ಲಿ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿಯನ್ನು ಬಿಟ್ಟರೆ ಬೇರೊಂದು ಶಾರ್ಟ್ಕಟ್ ಇಲ್ಲ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಶುಕ್ರವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜು. 15ರಂದು ದೇಶಾದ್ಯಂತ ವಂದೇ ಮಾತರಂ ಯೋಜನೆಯಡಿ ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಆಯೋಜಿಸುತ್ತಿರುವ ‘ವಂದೇಮಾತರಂ’ ಯೋಜನೆ ಅಂಗವಾಗಿ ರಂಗಭೂಮಿ ಉಡುಪಿ ಸಂಸ್ಥೆಯ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ‘ಸ್ವಾತಂತ್ರ್ಯ ಶರಧಿ’ ನಾಟಕದ ಸಿದ್ಧತೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ರಂಗ ಭೂಮಿ ಉಡುಪಿ ಸಂಸ್ಥೆ ಇಂದು ತನ್ನ 61ನೇ ಸಾಧನಾ ಪಥದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ದೇಶ ವಿದೇಶದ ಗಮನ ಸೆಳೆದಿದೆ. ಈ ಸಾಧನೆಯೇ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗಮನ ಸೆಳೆದು ಈ ನಾಟಕ ಸಿದ್ಧತೆಯ ಜವಾಬ್ದಾರಿ ನೀಡಿದೆ ಎಂದು ತಿಳಿಸಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಪೈ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ಇಷ್ಟಪಟ್ಟು ಮಾಡಬೇಕು. ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಜು.15ರಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕಾಳಿದಾಸ ಜಯಂತಿಯ ಸುಸಂದರ್ಭದಲ್ಲಿ ದೇಶಾದ್ಯಂತ ವಂದೇ ಮಾತರಂ ವಿಚಾರದಲ್ಲಿ ನಾಟಕಗಳು ನಡೆಸಲು ಉದ್ದೇಶಿಸಿದೆ. ಕರ್ನಾಟಕದಲ್ಲಿ ಉಡುಪಿ ಮತ್ತು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಉಡುಪಿಯಲ್ಲಿ ನಾಟಕ ಸಿದ್ಧತೆಗೆ ರಂಗಭೂಮಿ ಉಡುಪಿಗೆ ಅವಕಾಶ ನೀಡಿರುವುದು ಉಡುಪಿಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಂಜಿಎಂ ಪಪೂ ಕಾಲೇಜಿನ ಪ್ರಾಂಶುಪಾಲಿ ಮಾಲತಿದೇವಿ, ಉಪ ಪ್ರಾಂಶುಪಾಲ ವಿಶ್ವನಾಥ್ ಪೈ, ನಾಟಕದ ನಿರ್ದೇಶಕ ಪ್ರಶಾಂತ್ ಉದ್ಯಾವರ ಹಾಗೂ ರಂಗಭೂಮಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.