ಪತ್ರಿಕಾ ವಿತರಕರ ಶ್ರಮ, ಸಮಯ ಪ್ರಜ್ಞೆ ಶ್ಲಾಘನೀಯ: ರಮೇಶ ಜಾರಕಿಹೊಳಿ

| Published : Sep 09 2024, 01:32 AM IST

ಪತ್ರಿಕಾ ವಿತರಕರ ಶ್ರಮ, ಸಮಯ ಪ್ರಜ್ಞೆ ಶ್ಲಾಘನೀಯ: ರಮೇಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕೆಯನ್ನು ಮನೆಗಳಿಗೆ ಸರಿಯಾದ ಸಮಯಕ್ಕೆ ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಪತ್ರಿಕೆಯನ್ನು ಮನೆಗಳಿಗೆ ಸರಿಯಾದ ಸಮಯಕ್ಕೆ ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಮಹತ್ವದ್ದಾಗಿದೆ. ಎಂಥದ್ದೇ ಸಂದರ್ಭದಲ್ಲೂ ಬೆಳಗಿನ ಜಾವ ಜಗತ್ತಿನ ಆಗುಹೋಗುಗಳ ಸುದ್ದಿ ಹೊತ್ತು ತರುವ ವಿತರಕರ ಶ್ರಮ, ಸಮಯ ಪ್ರಜ್ಞೆ ಹಾಗೂ ಕಾಯಕನಿಷ್ಠೆ ಶ್ಲಾಘನೀಯವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಭಾನುವಾರ ನಗರದ ತಮ್ಮ ಕಾರ್ಯಾಲಯದಲ್ಲಿ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ 15ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು. ಮಳೆ, ಚಳಿ, ಗಾಳಿ ಇವೆಲ್ಲವನ್ನೂ ಲೆಕ್ಕಿಸದೆ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಕೋವಿಡ್, ಲಾಕ್ ಡೌನ್‌ನಂತಹ ಸಂದರ್ಭದಲ್ಲಿಯೂ ಕೊರೊನಾ ವಾರಿಯರ್ಸ್‌ಗಳಂತೆ ತಮ್ಮ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಸಮಾಜದಲ್ಲಿ ಪತ್ರಿಕೆಗಳ ಓದುಗರು ಹೆಚ್ಚಾಗಬೇಕು. ಪತ್ರಿಕೆಗಳನ್ನು ಕೊಂಡು ಓದುವ ಮನೋಭಾವ ಬೆಳೆಸಿಕೊಂಡರೆ ಪತ್ರಿಕಾ ಸಂಸ್ಥೆಗಳು ಮತ್ತು ಇದರಲ್ಲಿ ದುಡಿಯುವ ಸಿಬ್ಬಂದಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪತ್ರಿಕೆ ಓದುಗರು ಹಣಕೊಟ್ಟು ಪತ್ರಿಕೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾದರೆ ವಿತರಕರ ಬದುಕಿಗೆ ಆಶ್ರಯವಾಗಿ ಪತ್ರಿಕೋದ್ಯಮ ಬೆಳೆಯುತ್ತದೆ ಎಂದು ಹೇಳಿದರು.

ಪತ್ರಿಕಾ ವಿರತಕರಾದ ವಿವೇಕ ಮೂಲಂಗಿ, ಪ್ರಕಾಶ ಸುಣಗಾರ, ಮಹಾದೇವ ಗುದಗಗೋಳ, ಮಹಾಂತೇಶ ಮೂಲಂಗಿ, ಆಯೂಬ್, ಕೊಳಕಿ, ವೀರಭದ್ರ ಪಾಟೀಲ ಇತರರುನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.

ಮಾಜಿ ಜಿಪಂ ಸದಸ್ಯ ಟಿ.ಆರ್. ಕಾಗಲ, ಶಾಸಕ ಆಪ್ತಸಹಾಯಕ ಭೀಮಗೌಡ ಪೋಲಿಸಗೌಡರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಮುಖಂಡರಾದ ಸುರೇಶ ಸನದಿ, ಜಾವೇದ್‌ ಗೋಕಾಕ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ಪ್ರಧಾನ ಕಾರ್ಯದರ್ಶಿ ಸಾದಿಕ ಹಲ್ಯಾಳ, ಕಾರ್ಯದರ್ಶಿ ಪ್ರದೀಪ ನಾಗನೂರ, ಸಹಕಾರ್ಯದರ್ಶಿ ಬಸವರಾಜ ಭರಮಣ್ಣವರ ಇತರರು ಇದ್ದರು.