ಸಾರಾಂಶ
ಪಟ್ಟಣದ ಶ್ರೀ ವೀರಭಧ್ರೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ನೂತನ ಅಧ್ಯಕ್ಷ -ಉಪಾಧ್ಯಕ್ಷರ ಪದಗ್ರಹಣ
ಕನ್ನಡ ಪ್ರಭ ವಾರ್ತೆ, ಕಡೂರುಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡೂರು ಶೈಕ್ಷಣಿಕ ವಲಯದ ನೂತನ ಅಧ್ಯಕ್ಷರಾಗಿ ಕೆ.ಎಂ.ಹರೀಶ್ ಅಗ್ನಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಸುಹೇಲ್ ಆಯ್ಕೆಯಾದರು. ಪಟ್ಟಣದ ಶ್ರೀ ವೀರಭಧ್ರೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ನೂತನ ಅಧ್ಯಕ್ಷ -ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಇಬ್ಬರನ್ನು ಅಭಿನಂದಿಸಿದ ಕಡೂರು ಬಿಇಒ ಸಿದ್ದರಾಜನಾಯ್ಕ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿ ಅವರ ಕೆಲಸ ಕಾರ್ಯಗಳನ್ನು ಹರೀಶ್ ಹಾಗೂ ಸುಹೇಲ್ ಮಾಡಿಕೊಡಬೇಕು. ಇಬ್ಬರೂ ಉತ್ತಮ ತರಗತಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವುದನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಆತುರದ ನಿರ್ಣಯಗಳನ್ನು ತೆಗೆದು ಕೊಳ್ಳದೆ ಶಿಕ್ಷಕರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿ ಶುಭಾಷಯ ಕೋರಿದರು.
ನೂತನ ಅಧ್ಯಕ್ಷ ಕೆ.ಎಂ.ಹರೀಶ್ ಅಗ್ನಿ ಮಾತನಾಡಿ, ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ವಿದ್ಯೆ ಹೇಳಿ ಕೊಡುವ ಶಿಕ್ಷಕರ ಸಮಸ್ಯೆಗಳಿಗೆ ಶಿಕ್ಷಕರ ಸಂಘ ಎಲ್ಲ ಶಿಕ್ಷಕರ ಒಳಿತಿಗಾಗಿ ಸದಾ ಶ್ರಮಿಸುತ್ತಿದೆ. ನಾನು ಕೂಡ ನನ್ನ ಇತಿಮಿತಿಯಲ್ಲಿ. ಎಲ್ಲರ ಸಹಕಾರದೊಂದಿಗೆ ಶಿಕ್ಷಕರ ಧ್ವನಿಯಾಗಿ ಸಂಘದ ಏಳಿಗೆಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸು ತ್ತೇನೆ ಎಂದು ತಿಳಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ದಾರಿದೀಪವಾದ ಶಿಕ್ಷಕರ ಸಂಘಕ್ಕೆ ಪುರ ಸಭೆ ಪೂರ್ಣ ಸಹಕಾರ ನೀಡುತ್ತದೆ. ಕಡೂರು ಪಟ್ಟಣಕ್ಕೆ ಅಗತ್ಯವಾದ ಗುರುಭವನ ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡುವ ಜೊತೆಗೆ ಶಾಸಕರ ಅನುದಾನ ದೊರಕಿಸುವ ಪ್ರಯತ್ನ ನೀಡುತ್ತೇನೆ ಎಂದರು. ಎಂ.ಬಿ.ಮಂಜುನಾಥ್ ಮಾತನಾಡಿ, 2019ರಲ್ಲಿ ಈ ನಮ್ಮ ತಂಡಕ್ಕೆಶಿಕ್ಷಕರು ಬೆಂಬಲ ನೀಡಿದ್ದರಿಂದ ಶಿಕ್ಷಕರ ಸಮಸ್ಯೆ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬರುತ್ತಿದೆ. ಮುಂದೆ ಕೂಡ ನಿಮ್ಮ ಸಹಕಾರ ಇದೇ ರೀತಿ ಇರಲಿ ಎಂದು ಕೋರಿದರು. ಸಮಾರಂಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಲಿಂಗರಾಜು, ಎಂ.ಬಿ.ಮಂಜುನಾಥ್, ಪುರಸಭಾ ಸದಸ್ಯ ತೋಟದಮನೆ ಮೋಹನ್, ಪುರಸಭಾ ಮಾಜಿ ಸದಸ್ಯ ಎಂ.ಸೋಮಶೇಖರ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹೊಸೂರು ಪುಟ್ಟರಾಜು, ಎಂ.ಚಂದ್ರಶೇಖರ್, ಜಿಲ್ಲಾ ಪ್ರಾಥಮಿಕ ಸಂಘದ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.4ಕೆಕೆಡಿಯು1. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಕೆ.ಎಂ.ಹರೀಶ್ ಅಗ್ನಿ ಮತ್ತು ಪ್ರಧಾನ ಕಾರ್ಯದರ್ಶಿ ಸಯ್ಯದ್ ಸುಹೇಲ್ ರವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.