ಸಂಪ್ರದಾಯದ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಹಲವು ಅನಿಷ್ಟ ಕಟ್ಟುಪಾಡುಗಳನ್ನು ವಿಧಿಸುತ್ತಿದ್ದು, ಇದನ್ನು ನಾವು ಬಿಡಬೇಕಾಗಿದೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಎಂ.ಮಹೇಶ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಸಂಪ್ರದಾಯದ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಹಲವು ಅನಿಷ್ಟ ಕಟ್ಟುಪಾಡುಗಳನ್ನು ವಿಧಿಸುತ್ತಿದ್ದು, ಇದನ್ನು ನಾವು ಬಿಡಬೇಕಾಗಿದೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಎಂ.ಮಹೇಶ್ ಕರೆ ನೀಡಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಗೊಲ್ಲರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ಅಲೆಮಾರಿ ಸಮುದಾಯಕ್ಕೆ ಸೇರಿದ ಕಾಡುಗೊಲ್ಲರ ಹಟ್ಟಿಗಳಲ್ಲಿ ಜಾಗದ ಕೊರತೆ ಮತ್ತು ಮೌಢ್ಯತೆಯಿಂದ ಇಂತಹ ಸಂಪ್ರದಾಯಗಳು ಮುಂದುವರೆದುಕೊಂಡು ಬಂದಿವೆ. ಆದರೆ ಕಾಲ ಬದಲಾಗಿದೆ. ವೈಜ್ಞಾನಿಕವಾಗಿ ನಾವು ಆಲೋಚಿಸಿ, ಇಂತಹ ಪದ್ದತಿಗಳಿಂದ ಹೊರಬರುವ ಕೆಲಸ ಮಾಡಬೇಕು. ಇದೇ ನಾವು ಶ್ರೀಕೃಷ್ಣನಿಗೆ ನೀಡುವ ನಿಜವಾದ ಗೌರವ ಎಂದರು.

ಸ್ವಾತಂತ್ರ ನಂತರ ಮೊದಲ ಬಾರಿ ನಿಗಮ ಸ್ಥಾಪಿಸಿ, ಅದರ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯದ ತಮ್ಮ ಜಾತಿಯ ಹೆಸರನ್ನು ಎದೆ ಉಬ್ಬಿಸಿ ಹೇಳುವಂತಹ ಧರ್ಯ ತೋರಬೇಕು.ಅದರಲ್ಲಿಯೂ ವಿದ್ಯಾವಂತರು ಈ ನಿಟ್ಟಿನಲ್ಲಿ ಇತರರಿಗೆ ಮಾದರಿಯಾಗಬೇಕು. ರಾಜ್ಯದಲ್ಲಿ ಕಾಡುಗೊಲ್ಲರ ಸಂಖ್ಯೆ 10 ಲಕ್ಷಕ್ಕೂ ಅಧಿಕವಿದೆ. ಆದರೆ ವಿವಿಧ ಸೌಲಭ್ಯಗಳಿಗಾಗಿ ನಿಗಮ ಅರ್ಜಿ ಕರೆದರೆ ಕೇವಲ 4500 ಜನರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇದು ಶೇ 5 ಸಹ ಇಲ್ಲ. ಜನರಲ್ಲಿ ಜಾಗೃತಿ ಇಲ್ಲವೋ, ಅಥವಾ ಉದಾಸೀನವೋ ತಿಳಿಯದು ಎಂದರು.

ಅರ್ಜಿಗಳು ಹೆಚ್ಚಿಗೆ ಬಂದಷ್ಟು ಸರ್ಕಾರದ ಹೆಚ್ಚು ಅನುದಾನ ನಿರೀಕ್ಷೆ ಮಾಡಬಹುದು. ಈ ವರ್ಷದಿಂದ ಅಲೆಮಾರಿ ಪ್ರವೃತ್ತಿಯ ಕುರಿಗಾಯಿಗಳಿಗೆ ಒಂದೆಡೆಯಿಂದ ಇನ್ನೊಂದಡೆಗೆ ತಮ್ಮ ಸಾಮಾನು, ಸರಂಜಾಮುಗಳನ್ನು ಸಾಗಿಸಲು ಅನುಕೂಲವಾಗುವಂತೆ ನಿಗಮದಿಂದ ಟ್ರಾಕ್ಟರ್ ನೀಡಲು ಅರ್ಜಿ ಕರೆದಿದ್ದೇವೆ. ಸರ್ಕಾರ ನಮ್ಮ ಕೋರಿಕೆ ಮನ್ನಸಿ, ಟ್ರಾಕ್ಟರ್‌ಗೆ ಸಹಾಯ ಧನ ನೀಡಲು ಮುಂದೆ ಬಂದಿದೆ. ಹಾಗೆಯೇ ಇತರೆ ಸಾಲ ಸೌಲಭ್ಯಗಳ ಪಡೆಯಲು ಅರ್ಜಿ ಸಲ್ಲಿಸುವಂತೆ ಎಂ.ಮಹೇಶ್ ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ಮಾತನಾಡಿದರು.

ಕಾರ್ಯಕ್ರಮಕ್ಕೂ ಮೊದಲು ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಟೌನ್‌ಹಾಲ್ ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಶ್ರೀಕೃಷ್ಣರ ಭಾವಚಿತ್ರದ ಮೆರವಣಿಗೆಯನ್ನು ಸಮುದಾಯದ ಮುಖಂಡರು ನಡೆಸಿದರು. ವೇದಿಕೆಯಲ್ಲಿ ಪ್ರೊ. ಗುರುಲಿಂಗಯ್ಯ, ಕರಿಯಣ್ಣ , ಈಶ್ವರ್ ಕು ಮರ್ಜಿರ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ, ಷಣ್ಮುಗಪ್ಪ, ಮಹಾಲಿಂಗಪ್ಪ,ಚಿಕ್ಕೇಗೌಡ, ಚಿಕ್ಕಪ್ಪಯ್ಯ, ಎಸ್.ಚಿಕ್ಕರಾಜು, ಬಿ.ಈರಯ್ಯ, ಕಲಾವಿದೆ ಅಕ್ಕಮ್ಮ, ಹನುಮಂತರಾಜು, ಶಿವಕುಮಾರಸ್ವಾಮಿ,ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಶಿವಣ್ಣ, ಬಯಲಾಟ ಕಲಾವಿದ ನಾಗರಾಜು, ಗೋವಿಂದರಾಜು,ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.