ಸಾರಾಂಶ
ಜಗತ್ತಿನ ಅನೇಕ ದೇಶಗಳು ಜನಸಂಖ್ಯಾ ದೃಷ್ಟಿಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಭಾರತ ಮಾತ್ರ ಜನಸಂಖ್ಯಾ ಹೆಚ್ಚಳದಿಂದ ಗಂಭೀರ ಸಮಸ್ಯೆ ಎದುರಿಸುತ್ತಿದ್ದು ಹೆಚ್ಚುತ್ತಿರುವ ಜನಸಂಖ್ಯೆ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಪ್ರಾಚಾರ್ಯ ಡಾ. ಎನ್. ವಾಯ್. ಬಡಣ್ಣವರ ಹೇಳಿದರು.
ಗುಳೇದಗುಡ್ಡ: ಜಗತ್ತಿನ ಅನೇಕ ದೇಶಗಳು ಜನಸಂಖ್ಯಾ ದೃಷ್ಟಿಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಭಾರತ ಮಾತ್ರ ಜನಸಂಖ್ಯಾ ಹೆಚ್ಚಳದಿಂದ ಗಂಭೀರ ಸಮಸ್ಯೆ ಎದುರಿಸುತ್ತಿದ್ದು ಹೆಚ್ಚುತ್ತಿರುವ ಜನಸಂಖ್ಯೆ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಪ್ರಾಚಾರ್ಯ ಡಾ. ಎನ್. ವಾಯ್. ಬಡಣ್ಣವರ ಹೇಳಿದರು.
ಅವರು ಗುರುವಾರ ಪಟ್ಟಣದ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಘಟಕಗಳ ಸಂಯೋಜನೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರುವಲ್ಲಿ ಹಿಂದುಳಿಯಲು ಜನಸಂಖ್ಯಾ ಸ್ಪೋಟವೂ ಒಂದು ಕಾರಣವಾಗಿದೆ. ಅಗಣಿತವಾದ ಈ ಹೆಚ್ಚಳದಿಂದ ದೇಶ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಜನಸಂಖ್ಯಾ ನಿಯಂತ್ರಣದಲ್ಲಿ ಭಾರತೀಯರು ಮೌಢ್ಯತೆ ತೊರೆಯಬೇಕು. ಮಿತ ಸಂತಾನದ ಅರಿವು ಎಲ್ಲರಲ್ಲಿಯೂ ಬರಬೇಕು. ಇತರೆ ಮುಂದುವರಿದ ದೇಶಗಳಲ್ಲಿರುವ ಜನಸಂಖ್ಯೆಯ ಪ್ರಮಾಣವನ್ನು ಅರಿಯಬೇಕು ಎಂದರು.ಮುಖ್ಯ ಅತಿಥಿಗಳಾಗಿ ಗ್ರಂಥಪಾಲಕ ಬಸವರಾಜ ಎಸ್. ಬಾಣದ ಮಾತನಾಡಿ, ಜನಸಂಖ್ಯೆ ನಿಯಂತ್ರಣದಿಂದ ದೇಶ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ. ಸಾಕ್ಷರತೆ ಪ್ರಮಾಣ ಹೆಚ್ಚಿದಂತೆಲ್ಲಾ ಜನಸಂಖ್ಯಾ ಹೆಚ್ಚಳ ಕಡಿಮೆಯಾಗುತ್ತದೆ. ಜನಸಂಖ್ಯಾ ಹೆಚ್ಚಳದಿಂದ ಆಗುವ ದುಷ್ಪರಿಣಾಮಗಳು ತುಂಬಾ ಗಂಭೀರವಾಗಿವೆ. ಯುವಕರು ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದರು.
ಡಾ.ಮಂಜಣ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಾಗೇಂದ್ರಸ್ವಾಮಿ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು ಮತ್ತು ಎನ್.ಎಸ್. ಎಸ್. ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.