-ಪುರಸಭೆ ಅಧ್ಯಕ್ಷ ಸುರೇಶ ಹೇಳಿಕೆ । ಮುಖಂಡರ ಸಭೆ ಬಳಿಕ ತೀರ್ಮಾನಿಸುವುದಾಗಿ ಸ್ಪಷ್ಟನೆ

------

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದ ಪ್ರಮುಖ ಧಾರ್ಮಿಕ ಹಾಗೂ ಸಾರ್ವಜನಿಕ ಕೇಂದ್ರವಾಗಿರುವ ದೈವದ ಕಟ್ಟೆ ಜೀರ್ಣೋದ್ಧಾರ ಕಾಮಗಾರಿಗೆ ಶನಿವಾರ ಶಾಸಕ ಆರ್. ಬಸನಗೌಡ ತುರುವಿಹಾಳ್ ಭೂಮಿಪೂಜೆ ನೆರವೇರಿಸಿದ್ದು, ಆದರೆ ದೈವದ ಕಟ್ಟೆ ಜೀರ್ಣೋದ್ಧಾರಕ್ಕೆ ಇನ್ನೂ ಅನುದಾನ ನಿಗದಿಯಾಗಿಲ್ಲ. ಅಲ್ಲದೆ, ಭೂಮಿಪೂಜೆ ಕಾರ್ಯಕ್ರಮದ ಕುರಿತು ಪುರಸಭೆಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂದು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ತಿಳಿಸಿದರು..

ಪಟ್ಟಣದ ದೈವದ ಕಟ್ಟೆ ಜೀರ್ಣೋದ್ಧಾರಕ್ಕೆ ಪುರಸಭೆಯ ಯಾವುದೇ ತಕರಾರಿಲ್ಲ. ಆದರೆ ಕಾಮಗಾರಿ ಕೈಗೊಳ್ಳುವ ಮುನ್ನ ಪುರಸಭೆ ಸದಸ್ಯರು, ದೈವದ ಮುಖಂಡರು ಹಾಗೂ ಪಟ್ಟಣದ ಹಿರಿಯರೊಂದಿಗೆ ಚರ್ಚಿಸಿ ಅವರ ಸಲಹೆ–ಸೂಚನೆಗಳನ್ನು ಪರಿಗಣಿಸುವುದು ಅಗತ್ಯವಾಗಿದೆ. ದೈವದ ಕಟ್ಟೆ ಜೀರ್ಣೋದ್ಧಾರ ವಿಚಾರವಾಗಿ ಶೀಘ್ರದಲ್ಲೇ ಪುರಸಭೆಯಲ್ಲಿ ಸಭೆ ಕರೆಯಲಾಗುವುದು. ಕಾಮಗಾರಿಯ ಅಗತ್ಯತೆ, ರೂಪುರೇಷೆ ಹಾಗೂ ಅನುಷ್ಠಾನದ ಕುರಿತು ಸದಸ್ಯರೊಂದಿಗೆ ಚರ್ಚಿಸಲಾಗುವುದು. ನಂತರ ದೈವದ ಮುಖಂಡರು ಹಾಗೂ ಹಿರಿಯರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುರೇಶ ಹರಸೂರು ಹೇಳಿದ್ದಾರೆ.


ಅನುದಾನ ಎಷ್ಟು?: ಜೀರ್ಣೋದ್ಧಾರ ಕಾಮಗಾರಿಗೆ ಇನ್ನೂ ಅನುದಾನ ನಿಗದಿಯಾಗದಿಯಾಗಿಲ್ಲ. ಆದರೆ ಭೂಮಿಪೂಜೆ ನೆರವೇರಿಸಿರುವುದು ಏಕೆ? ಎಂಬ ಪ್ರಶ್ನೆ ಉದ್ಭವಿಸಿದೆ. ಕಾಮಗಾರಿಯ ಅಂದಾಜು, ಅನುದಾನದ ಮೂಲ, ರೂಪುರೇಷೆ ಹಾಗೂ ಅನುಷ್ಠಾನದ ಕುರಿತು ಸ್ಪಷ್ಟತೆ ಅಗತ್ಯವಿದೆ. ದೈವದ ಕಟ್ಟೆ ಪಟ್ಟಣದ ಪ್ರಮುಖ ಕೇಂದ್ರವಾಗಿರುವುದರಿಂದ ಜೀರ್ಣೋದ್ಧಾರ ಕಾಮಗಾರಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಏಕಪಕ್ಷೀಯ ನಿರ್ಧಾರವಾಗದೆ, ಸ್ಥಳೀಯ ಮುಖಂಡರು, ಹಿರಿಯರು ಹಾಗೂ ಪುರಸಭೆಯ ಸಹಭಾಗಿತ್ವದಲ್ಲಿ ನಡೆಯಬೇಕು. ಎಲ್ಲರ ಅಭಿಪ್ರಾಯ ಪಡೆದು ಪಾರದರ್ಶಕವಾಗಿ ಕಾಮಗಾರಿ ಕೈಗೊಳ್ಳುವುದೇ ಸೂಕ್ತ ಎಂಬ ನಿಲುವನ್ನು ಪುರಸಭೆ ಅಧ್ಯಕ್ಷ ವ್ಯಕ್ತಪಡಿಸಿದ್ದಾರೆ. ಜೀರ್ಣೋದ್ಧಾರಕ್ಕೆ ವಿರೋಧವಿಲ್ಲ. ಆದರೆ, ಪಟ್ಟಣದ ದೈವದ ಮುಖಂಡರು ಹಾಗೂ ಹಿರಿಯರ ಸಲಹೆ ಪಡೆದು ಕಾಮಗಾರಿಯ ರೂಪುರೇಷೆ ಅಂತಿಮಗೊಳಿಸಬೇಕು. ಈ ಕುರಿತು ಪುರಸಭೆ ಸಭೆ ಹಾಗೂ ಬಳಿಕ ಮುಖಂಡರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸುರೇಶ ಹರಸೂರು ಮಾಹಿತಿ ನೀಡಿದ್ದಾರೆ.