ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಮತ್ತು ಅರೇಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ತಾಲೂಕು ಮಟ್ಟದ ಮಿಶ್ರತಳಿ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಇಪ್ಪತ್ತಕ್ಕೂ ಹೆಚ್ಚು ಹಸುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಹಾವಾಳದ ರೈತ ಕಾರ್ತಿಕ್ ಗೌಡ ಸಾಕಿದ್ದ ಹಸು ಎರಡು ಅವಧಿಗೆ 35.490 ಲೀಟರ್ ಹಾಲು ಕೊಡುವುದರೊಂದಿಗೆ ಪ್ರಥಮ ಸ್ಥಾನ ಪಡೆಯಿತು. ಕೊಂಡಜ್ಜಿಯ ಕಾರ್ತಿಕ್ ಗೌಡ ಸಾಕಿದ್ದಸಾಕಿದ್ದ ಹಸು 32.380 ಲೀಟರ್ ಹಾಲು ಕೊಡುವುದರೊಂದಿಗೆ ದ್ವಿತೀಯ ಸ್ಥಾನ ಗಳಿಸಿತು. ತಂಡಗದ ಶ್ರೀನಿವಾಸ್ ರವರ ಹಸು 28.240 ಲೀಟರ್ ಹಾಲು ನೀಡುವುದರೊಂದಿಗೆ ಮೂರನೇ ಸ್ಥಾನ ಗಳಿಸಿತು. ಈ ವೇಳೆ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮತ್ತು ಕೆಎಂಎಫ್ ನ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಮಾತನಾಡಿ ತಾಲೂಕಿನಲ್ಲಿ ಹೈನುಗಾರಿಕೆ ರೈತರ ಜೀವನಾಡಿಯಾಗಿದೆ. ಪ್ರತಿದಿನ ಕನಿಷ್ಠ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ತಾಲೂಕಿನ ರೈತಾಪಿಗಳು ಹೈನುಗಾರಿಕೆಯಿಂದ ಹಸನ್ಮುಖಿಯಾಗಿದ್ದಾರೆ. ಪ್ರತಿ ತಿಂಗಳು ತಾಲೂಕಿನ ಹೈನುಗಾರರ ಖಾತೆಗೆ ನೂರು ಕೋಟಿಗೂ ಅಧಿಕ ಹಣ ಜಮಾ ಆಗುತ್ತಿದೆ. ಒಕ್ಕೂಟದ ಎಲ್ಲಾ ಸೌಲಭ್ಯಗಳನ್ನು ಎಲ್ಲಾ ರೈತಾಪಿಗಳಿಗೂ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇಂದು ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ ಬಹುಮಾನ 20 ಸಾವಿರ ಮತ್ತು ತೃತೀಯ ಬಹುಮಾನ 10 ಸಾವಿರ ರೂ ದೊರೆಯಲಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು. ಈ ವೇಳೆ ಅರೇಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಬಿ.ಜಗದೀಶ್, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ದಪ್ಪ, ಕೆಎಂಎಫ್ ನ ವ್ಯವಸ್ಥಾಪಕ ಚಂದ್ರಶೇಖರ್ ಕೇದನೂರಿ, ವೈದ್ಯರುಗಳಾದ ಡಾ.ಪುಟ್ಟರಾಜು, ಡಾ.ಮಂಜುನಾಥ್, ಡಾ.ಸಾಗರ ಅವಟಿ, ಪರೀಕ್ಷಕರಾದ ಚಿಕ್ಕರಾಜು, ರಾಜೇಶ್, ಹಾಲು ಒಕ್ಕೂಟದ ವಿಸ್ತಿರಣಾಧಿಕಾರಿಗಳಾದ ಮಂಜುನಾಥ್, ಕಿರಣ್, ದಿವಾಕರ್, ಸುನಿಲ್, ಡಾ.ದೀಕ್ಷಿತ್, ಮುಖಂಡರಾದ ಕೆ.ಟಿ.ಶಿವಣ್ಣ, ಸ್ವಾಮಿ, ನಿವೃತ್ತ ಮುಖ್ಯೋಪಾಧ್ಯಾಯ ಶಿವಣ್ಣ ಸೇರಿದಂತೆ ಹಲವರು ಇದ್ದರು.