ಹಾನಗಲ್ಲ: ಮಾಜಿ ಪ್ರಧಾನಿಗಳಾದ ದಿ. ಇಂದಿರಾ ಗಾಂಧಿ, ದಿ. ರಾಜೀವ್ ಗಾಂಧಿ ಅವರ ಕಾಲದಿಂದಲೂ ರಾಷ್ಟ್ರಮಟ್ಟದಲ್ಲಿ ಸಂಘಟನೆಯಲ್ಲಿ ವಿಶೇಷ ಛಾಪು ಮೂಡಿಸಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ ಮತ್ತು ಜನಪರ ಚಿಂತನೆಯೊಂದಿಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಬಿ.ಕೆ. ಹರಿಪ್ರಸಾದ ಅವರನ್ನು ಭೇಟಿ ಮಾಡಿ ಅಭಿನಂದಿಸಿರುವ ಶ್ರೀನಿವಾಸ ಮಾನೆ, ಒಂದೆಡೆ ಆಡಳಿತದಲ್ಲಿ ಡಿ.ಕೆ. ಶಿವಕುಮಾರ, ಇನ್ನೊಂದೆಡೆ ಸಂಘಟನೆಯಲ್ಲಿ ಬಿ.ಕೆ. ಹರಿಪ್ರಸಾದ ಅವರ ನೇತೃತ್ವದಲ್ಲಿ ಗಟ್ಟಿ ನಾಯಕತ್ವ ಸಿಕ್ಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳು ಹಾಗೂ ಯುವಕರಿಗೆ ಅವಕಾಶ ಸಿಗುವ ನಂಬಿಕೆ ಇದೆ. ಹಾವೇರಿ ಜಿಲ್ಲೆಯ ಪರಿಸ್ಥಿತಿಯನ್ನು ವರಿಷ್ಠರಿಗೆ ವಿವರಿಸಿದ್ದು, ಜಿಲ್ಲೆಗೆ ಸಚಿವ ಸ್ಥಾನ ಏಕೆ ನೀಡಬೇಕು? ಎನ್ನುವುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಜಿಲ್ಲೆಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದಿರುವ ಶಾಸಕ ಮಾನೆ, ರಾಜಕಾರಣ ಎಂದರೆ ನಿತ್ಯವೂ ಸಹ ಸವಾಲು ಎದುರಿಸಬೇಕಾಗುತ್ತದೆ. ಸವಾಲು ಎದುರಿಸಿ, ಜನಸೇವೆಯ ಮೂಲ ಉದ್ದೇಶ ಈಡೇರಿಸಲು ಆದ್ಯತೆ ನೀಡಬೇಕಿದೆ ಎಂದಿದ್ದಾರೆ. ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರ ಭೇಟಿಯ ಸಂದರ್ಭದಲ್ಲಿ ಶಿಗ್ಗಾಂವಿ, ಸವಣೂರು ಕ್ಷೇತ್ರದ ಶಾಸಕ ಯಾಸೀರಖಾನ್ ಪಠಾಣ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಇದ್ದರು.