ಸಾರಾಂಶ
ಮಹಿಳೆಯರು ಬಿಟ್ಟಿ ಭಾಗ್ಯ ಪಡೆದು ದಾರಿ ತಪ್ಪಿದ್ದಾರೆ ಎನ್ನುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು. ಅವರಿಗೆ ವಯಸ್ಸಾಗಿದೆ. ಆರೋಗ್ಯ ಬೇರೆ ಸರಿ ಇಲ್ಲ. ಆರಾಮಾಗಿ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯಲಿ. ಮಹಿಳೆಯರ ಬಗ್ಗೆ ಗೌರವವೂ ಇಲ್ಲ. ಬರಗಾಲದಲ್ಲಿ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ಸ್ವಲ್ಪ ಆಸರೆಯಾಗಿವೆ ಎಂಬ ಕನಿಷ್ಟ ಪ್ರಜ್ಞೆಯೂ ಅವರಲ್ಲಿ ಇಲ್ಲ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರೇ ಪೂರ್ತಿ ದಾರಿ ತಪ್ಪಿದ್ದಾರೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್.ವಿಮಲಾ ಹೇಳಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಮುದಾಯ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಆಯೋಜಿಸಿದ್ದ ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಿ ಮಹಿಳಾ ಮತದಾರರ ಜಾಗೃತಿ ಸಮಾವೇಶದಲ್ಲಿ ಕಿರು ಹೊತ್ತಿಗೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಹಿಳೆಯರು ಬಿಟ್ಟಿ ಭಾಗ್ಯ ಪಡೆದು ದಾರಿ ತಪ್ಪಿದ್ದಾರೆ ಎನ್ನುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು. ಅವರಿಗೆ ವಯಸ್ಸಾಗಿದೆ. ಆರೋಗ್ಯ ಬೇರೆ ಸರಿ ಇಲ್ಲ. ಆರಾಮಾಗಿ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯಲಿ ಸಲಹೆ ನೀಡಿದರು.ಮಹಿಳೆಯರ ಬಗ್ಗೆ ಗೌರವವೂ ಇಲ್ಲ. ಬರಗಾಲದಲ್ಲಿ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ಸ್ವಲ್ಪ ಆಸರೆಯಾಗಿವೆ ಎಂಬ ಕನಿಷ್ಟ ಪ್ರಜ್ಞೆಯೂ ಅವರಲ್ಲಿ ಇಲ್ಲ. ರಾಜ್ಯದ ಮಹಿಳೆಯರು ಮತ ಹಾಕುವ ಮುನ್ನ ಯೋಚಿಸಬೇಕು. ಕುಮಾರಸ್ವಾಮಿ ಅವರಿಗೆ ಮಂಡ್ಯದ ಜನರು ರಾಜಕೀಯದಿಂದ ವಿಶ್ರಾಂತಿ ನೀಡಲಿ ಎಂದರು.
ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಕೇಂದ್ರ ಸರ್ಕಾರ ಜನರನ್ನು ಧರ್ಮ, ಜಾತಿಯ ಹೆಸರಿನಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ಧರ್ಮ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತ ಸಂವಿಧಾನ ಕಡೆಗಣಿಸುವವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸಲಾರದು ಎಂದರು.ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಲತಾ, ಕಾರ್ಯದರ್ಶಿ ಸುಶೀಲಾ, ಜಿಲ್ಲಾ ಉಪಾಧ್ಯಕ್ಷೆ ಶೋಭಾ, ತಾಲೂಕು ಘಟಕದ ಕಾರ್ಯದರ್ಶಿ ವರದೇವಿ, ಪ್ರಮುಖರಾದ ಪ್ರೇಮಾ, ಜಯಶೀಲಾ ಇದ್ದರು.