ಸಾರಾಂಶ
ಗುಣಮಟ್ಟದ ಸೇವೆಗೆ ಲಕ್ಷ್ಯಾ ಪ್ರಶಸ್ತಿ ಲಭಿಸಿರುವುದು ವೈದ್ಯರು, ದಾದಿಯರು ಹಾಗೂ ಆಯಮ್ಮಗಳ ಸೇವೆಯಿಂದಾಗಿದೆಜಿಲ್ಲೆಯ ಐದು ಆಸ್ಪತ್ರೆಗಳು ಪ್ರಶಸ್ತಿಗೆ ಭಾಜನವಾಗಿವೆ.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಭಾರತ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಷನ್ ವತಿಯಿಂದ ಟಿ. ನರಸೀಪುರ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದ ಉತ್ತಮ ಗುಣಮಟ್ಟದ ಸೇವೆಗೆ ಲಕ್ಷ್ಯಾ ಪ್ರಶಸ್ತಿ ಲಭಿಸಿರುವುದು ನಮ್ಮ ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಆಯಮ್ಮಗಳ ಸೇವೆಯಿಂದಾಗಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅಭಿಲಾಶ್ ಶ್ಲಾಘಿಸಿದರು.ಈ ಬಾರಿಯ ಲಕ್ಷ್ಯಾ ಪ್ರಶಸ್ತಿ ನಮ್ಮ ಟಿ. ನರಸೀಪುರ ಆಸ್ಪತ್ರೆಗೆ ಲಭಿಸಿರುವುದು ಹೆಮ್ಮೆ ತಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಿಲ್ಲೆಯ ಐದು ಆಸ್ಪತ್ರೆಗಳು ಪ್ರಶಸ್ತಿಗೆ ಭಾಜನವಾಗಿವೆ. ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿದ್ದು, ನಮ್ಮ ಆಸ್ಪತ್ರೆ ಮೊದಲನೇ ಪ್ರಯತ್ನದಲ್ಲೇ ಪ್ರಶಸ್ತಿಗೆ ಭಾಜನವಾಗಿರುವುದು ಸಂತಸದ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚಿದೆ ಎಂದರು.ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞ ಡಾ. ನವೀನ್ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ಹೆರಿಗೆ ವಿಭಾಗ ಮತ್ತು ಅರವಳಿಕೆ ವಿಭಾಗಕ್ಕೆ ಉತ್ತಮ ಗುಣಮಟ್ಟದ ಸೇವೆಗೆ ನೀಡುತ್ತಿದ್ದಾರೆ. ಹೆರಿಗೆ ಸಮಯದಲ್ಲಿ ಕ್ಲಿಷ್ಟಕರವಾದ ಸಮಸ್ಯೆಗಳನ್ನು ನಿಭಾಯಿಸಲಿಕ್ಕೆ ಲಕ್ಷ್ಯಾ ಕಾರ್ಯಕ್ರಮದಲ್ಲಿ ತರಬೇತಿಯಾಗಿರುತ್ತದೆಂದರು.
ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್, ಪ್ರಸೂತಿ, ಸ್ತ್ರೀ ರೋಗ ತಜ್ಞರುಗಳಾದ ಡಾ. ನವೀನ್, ಡಾ. ರಮ್ಯ, ಡಾ. ರಿತೀಶ್, ಅರವಳಿಕೆ ತಜ್ಞರಾದ ಡಾ. ನೀಲವೇಣಿ, ಮಕ್ಕಳ ತಜ್ಞರಾದ ಡಾ. ಮಾನಸ, ಡಾ. ನಂದಿನಿ, ದಾದಿಯರಾದ ಗೀತಾ, ನಿರ್ಮಲಾ, ಲತಾದೇವಿ, ತುಳಸೀಮಣಿ, ಪ್ರಭಾವತಿ, ಜಯಂತಿ, ಪದ್ಮಾವತಿ, ಮಹದೇವಿ, ಅರ್ಚನಾ, ವೀಣಾ, ಸುಧಾ, ಪೊನ್ನಮ್ಮ, ಉಮೇಶ್, ಆಸ್ಪತ್ರೆಯ ಇನ್ನಿತರೆ ದಾದಿಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.