ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಲು ಅವಕಾಶ ಕಲ್ಪಿಸುವ ಮೂಲಕ ಮಹತ್ಮಾ ಗಾಂಧೀಜಿಯವರು ಕ್ಲಾಸ್ ಮ್ಯೂಮೆಂಟ್ ನಿಂದ ಮಾಸ್ ಮ್ಯೂಮೆಂಟ್ ಆಗಿ ಪರಿವರ್ತನೆ ಮಾಡಿದರು ಎಂದು ಬೀದರ್ ನೂತನ ನಗರ ಪೊಲೀಸ್ ಠಾಣೆಯ ಸಿಪಿಐ ವಿಜಕುಮಾರ ಬಾವಗಿ ನುಡಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜನಪದ ಕಲಾವಿದರ ಬಳಗ ಬೀದರ್ ಇವರ ಸಂಯುಕ್ತಾಶ್ರದಲ್ಲಿ ಗಾಂಧೀಜಿಯವರ ವಿಚಾರ ಪ್ರಸ್ತುತತೆ ಯುವ ಜನತೆಗೆ " ವಿಷಯ ಕುರಿತು ಆಯೋಜಿಸಿದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರ ಬಗ್ಗೆ ಇರುವ ಪ್ರಶ್ನೆಗಳಿಗೆ ಅವರೆ ಉತ್ತರವಾಗಿದ್ದರು ಎಂದರು.
ಟಿ.ದಾಸರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕೆ.ಜಿ.ಎಸ್.ಎನ್ ಕಾರ್ಯಕ್ರಮ ಸಂಘಟಕರಾದ ಡಾ. ಅಬಿದಾ ಬೇಗಂ ಮಾತನಾಡಿ, ಹೆಣ್ಣು ಮಕ್ಕಳು ಕೆವಲ ಅಕ್ಷರದ ಶಿಕ್ಷಣ ಪಡೆದರೆ ಸಾಲದು, ಜೀವನದ ಶಿಕ್ಷಣ ಪಡೆಯಬೇಕು. ಆದರೆ ಮಕ್ಕಳಿಗೆ ಮೌಲ್ಯಯುತ ಜೀವನದ ಶಿಕ್ಷಣ ನೀಡದೆ, ಕೇವಲ ಅಕ್ಷರಕ್ಕೆ ಸೀಮಿತವಾದ ಶಿಕ್ಷಣ ನೀಡಲಾಗುತ್ತಿದ್ದು ಇದು ಬದಲಾಗಬೇಕೆಂದರು.ನಾವು ಹೆಣ್ಣು ಮಕ್ಕಳಲ್ಲಿ ಸ್ಫೂರ್ತಿ ತುಂಬಬೇಕು ಎಂಬ ಸದುದ್ದೇಶದಿಂದ ಮಹಿಳಾ ಕಾಲೇಜುಗಳಲ್ಲಿ ಹೆಚ್ಚಾಗಿ ಇಂತಹ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದ್ದೇವೆ ಇದರ ಲಾಭವನ್ನು ಎಲ್ಲಾ ಹೆಣ್ಣು ಮಕ್ಕಳು ಪಡೆಯಬೇಕು ಎಂದರು.
ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಕುಮಾರ ಸೋನಾರೆ ಮಾತನಾಡಿ, ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಬಿತ್ತುವುದಾಗಿದೆ. ಅದು ಅಗತ್ಯವು ಹೌದು ಅವರ ಸತ್ಯ, ಅಹಿಂಸೆ, ತ್ಯಾಗ ಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನಾವು ಶುದ್ಧಿಕರಣ ಮಾಡಬಹುದು ಎಂದರು.ಸ್ತ್ರೀಶಕ್ತಿ ಮತ್ತು ಕಸ್ತೂರ ಬಾ ಗಾಂಧಿ ವಿಷಯ ಕುರಿತು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಅಬಿದಾ ಬೇಗಂ, ಗಾಂಧೀಜಿಯವರ ವಿದ್ಯಾರ್ಥಿ ಜೀವನ ಕುರಿತು ಬೀದರ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಾರ್ವತಿ ವಿ. ಸೋನಾರೆಯವರು ಗಾಂಧೀಜಿಯವರನ್ನು ಇಂದಿನ ಮಕ್ಕಳಿಗೆ ಪರಿಚಯ ಮಾಡಿಸುವ ಅವಶ್ಯಕತೆ ಇದೆ. ನಾವು ಕನ್ನಡಿಯಂತಾಗದೆ ಗೀಜಿನಂತಾಗಿ ಎರಡೂ ಮಗ್ಗುಲುಗಳನ್ನು ನೋಡಿ ವಿಮರ್ಶಿಸಬೇಕು. ಮತ್ತು ಅವರನ್ನು ಆಳವಾಗಿ ಅದ್ಯಯನ ಮಾಡಬೇಕು. ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಗಾಂದೀಜಿಯನ್ನು ಇಂದಿನ ಮಕ್ಕಳು ಓದಲೇ ಬೇಕು ಎಂದರು.
ಮಹಿಳೆಯರ ಶಿಕ್ಷಣ ಕುರಿತು ಸಾಹಿತಿ ಕಸ್ತೂರಿ ಪಟಪಳ್ಳಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲ ಮನೋಜಕುಮಾರ ಕುಲಕರ್ಣಿ, ಎನ್.ಎಸ್.ಎಸ್.ಅಧಿಕಾರಿ ಶ್ರೀನಿವಾಸ ರೆಡ್ಡಿ, ಡಾ. ವಿದ್ಯಾ ಪಾಟೀಲ್, ಸಹ-ಪ್ರಾಧ್ಯಪಕ ವಿಜಯಲಕ್ಷ್ಮೀ, ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ, ಜಾನಪದ ಕಲಾವಿದರ ಬಳಗದ ಕಾರ್ಯದರ್ಶಿ ಯೇಸುದಾಸ ಅಲಿಯಂಬುರೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಚಂದ್ರಕಾಂತ ಹಳ್ಳಿಖೇಡಕರ್, ಮಾರುತಿ ಏಣಕುರೆ, ಕುಪೇಂದ್ರ ಹೊಸಮನಿ, ಅಂಬರೇಶ ಮಲ್ಲೇಶಿ, ಬಾಲಾಜಿ ಜಬಾಡೆ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.