ಪೊಲೀಸ್ ವಸತಿಗೃಹದಲ್ಲೇ ಮುಖ್ಯಪೇದೆ ನೇಣಿಗೆ ಶರಣು

| Published : Jul 17 2025, 12:30 AM IST

ಸಾರಾಂಶ

2005ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಕಳೆದ 2 ವರ್ಷಗಳಿಂದ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆ ಆವರಣದಲ್ಲಿರುವ ವಸತಿಗೃಹದಲ್ಲೇ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಮದ್ಯಾಹ್ನ ನಡೆದಿದೆ.ಮೃತ ಕಾನ್‌ಸ್ಟೇಬಲ್ ಅನ್ನು 48 ವರ್ಷದ ರಾಜಶೇಖ‌ರ್ ಎಂದು ಗುರುತಿಸಲಾಗಿದೆ.

2005ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಕಳೆದ 2 ವರ್ಷಗಳಿಂದ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗೌರಿಬಿದನೂರು (ಗ್ರಾ) ಪೊಲೀಸ್ ಠಾಣಾ ವ್ಯಾಪ್ತಿಯ ಹುದುಗೂರು ಗ್ರಾಮದ ಜಾತ್ರಾ ಬಂದೊಬಸ್ತ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಜಾತ್ರೆ ಕರ್ತವ್ಯಕ್ಕೆ ಹೋದವರು ವಾಪಸ್ ಬಂದು ತನಗೆ ನೀಡಿದ್ದ ಪೊಲೀಸ್ ವಸತಿ ಗೃಹ ಸಂಖ್ಯೆ 5 ರಲ್ಲಿ ಸಮವಸ್ತ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಶೇಖರ್ ಅವರು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಹತಾಶನಾಗಿದ್ದರು ಎನ್ನಲಾಗುತ್ತಿದೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಮೃತ ರಾಜಶೇಖ‌ರ್ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಮೂಲದವರಾಗಿದ್ದು ಅವರ ಕುಟುಂಬ ಶಿಡ್ಲಘಟ್ಟದಲ್ಲೇ ನೆಲೆಸಿದ್ದಾರೆ. ಸ್ಥಳಕ್ಕೆ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಷೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸಿಕೆಬಿ-3 ರಾಜಶೇಖ‌ರ್