ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗಣೇಶ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೆ.ಆರ್.ಮಾರುಕಟ್ಟೆ ಜಾಮಿಯಾ ಮಸೀದಿ ಜಮಾಯತ್-ಉಲ್ಮಾ ಸಂಘಟನೆ ಮುಖ್ಯಸ್ಥರು ಮಂಗಳವಾರ ಪಟ್ಟಣಕ್ಕೆ ಭೇಟಿ ಕೊಟ್ಟು ಹಾನಿಯಾದ ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿದರು.ಮಂಗಳವಾರ ಬೆಳಗ್ಗೆ ಪಟ್ಟಣಕ್ಕೆ ಭೇಟಿಕೊಟ್ಟ ಸಂಘಟನೆ ಮುಖ್ಯಸ್ಥರಾದ ಮುಫ್ತಿ ಇಫ್ತಿಖಾರ್ ಮತ್ತು ಮೌಲಾನಾ ಇಮ್ರಾನ್ ಮಸೂದ್ ಅವರು, ಮಂಡ್ಯ ರಸ್ತೆಯ ಹನೀಫ್ ಮಸೀದಿಯಲ್ಲಿ ಸಮುದಾಯದ ಸ್ಥಳೀಯ ಮುಖಂಡರ ಸಭೆ ನಡೆಸಿದರು.
ನಾಗಮಂಗಲದಲ್ಲಿ ನಡೆದಿರುವ ಗಲಭೆ ನಿಜಕ್ಕೂ ಬೇಸರ ತರಿಸಿದೆ. ಕಿಡಿಗೇಡಿಗಳು ಮಾಡಿರುವ ಈ ಕೃತ್ಯದಿಂದಾಗಿ ಇಡೀ ಸಮಾಜದ ಶಾಂತಿ ನೆಮ್ಮದಿ ಹಾಳಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಯಾವುದೇ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕು. ದ್ವೇಷ ಅಸೂಯೆಯಿಂದ ಯಾವುದೇ ಪ್ರಯೋಜನವಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ ಸಂಯಮದಿಂದ ಸಹಬಾಳ್ವೆ ನಡೆಸಿದರೆ ಎಲ್ಲರೂ ಶಾಂತಿ ನೆಮ್ಮದಿ ಬದುಕು ನಡೆಸಬಹುದು. ಈ ನಿಟ್ಟಿನಲ್ಲಿ ಸಮುದಾಯದ ಪ್ರತಿಯೊಬ್ಬರೂ ಈ ಹಿಂದಿನಂತೆ ಪಟ್ಟಣದ ಜನತೆಯೊಂದಿಗೆ ಪರಸ್ಪರ ಅಣ್ಣ-ತಮ್ಮಂದಿರಂತೆ ಇರಬೇಕು ಎಂದು ಕಿವಿಮಾತು ಹೇಳಿದರು.
ಬಳಿಕ ಮಂಡ್ಯ ರಸ್ತೆಯಲ್ಲಿ ಬೆಂಕಿಗಾಹುತಿಯಾಗಿರುವ ಹಿಂದೂ ಸಮುದಾಯದ ನಾಗೇಶ್ ಅವರ ಬಟ್ಟೆ ಅಂಗಡಿ ಮತ್ತು 1.5 ಕೋಟಿಗೂ ಹೆಚ್ಚು ಹಾನಿಯಾಗಿರುವ ಭೀಮರಾಜ್ ಮಾಲೀಕತ್ವದ ಸಾಧನಾ ಟೆಕ್ಸ್ಟೈಲ್ಸ್ಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ನಂತರ ಸುಟ್ಟು ಭಸ್ಮವಾಗಿರುವ ಎಲ್ಲಾ ಅಂಗಡಿಗಳಿಗೂ ಭೇಟಿಕೊಟ್ಟು ಪರಿಶೀಲಿಸಿದರು.ಈ ವೇಳೆ ಮುಸ್ಲಿಂ ಕಮಿಟಿ ಜಿಲ್ಲಾಧ್ಯಕ್ಷ ಮುಫ್ತಿ ರಿಜ್ವಾನ್, ಸ್ಥಳೀಯ ಮುಖಂಡರಾದ ಎಸ್.ಕೆ.ಖಾಸೀಂ, ಮೌಲಾನಾ ಆಸೀಫ್, ಅತೀಖ್ಪಾಷ, ಇಲಿಯಾಜ್ಪಾಷ ಸೇರಿದಂತೆ ಹಲವರು ಇದ್ದರು.
--------17ಕೆಎಂಎನ್ ಡಿ21
ಗಲಭೆ ಪ್ರಕರಣಕ್ಕೆ ಬೆಂಗಳೂರಿನ ಜಮಾಯತ್-ಉಲ್ಮಾ ಸಂಘಟನೆ ಮುಖ್ಯಸ್ಥರು ನಾಗಮಂಗಲ ಪಟ್ಟಣಕ್ಕೆ ಭೇಟಿ ಕೊಟ್ಟು ಹಾನಿಯಾದ ಸ್ಥಳ ಪರಿಶೀಲನೆ ನಡೆಸಿದರು.ಇಂದು ನಿಸಾರ್ಅಹಮ್ಮದ್ ಭೇಟಿನಾಗಮಂಗಲ:
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಸೆ.18ರಂದು ಪಟ್ಟಣಕ್ಕೆ ಭೇಟಿ ಕೊಟ್ಟು ಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.ಬುಧವಾರ ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುವರು. ಬಳಿಕ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಂಡ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.