ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಭರತನಾಟ್ಯ ಕಲಿಯುವುದರಿಂದ ಮಾನಸಿಕ ದೈಹಿಕ ಆರೋಗ್ಯ ಚೆನ್ನಾಗಿರುವುದರ ಜತೆಗೆ ಕಣ್ಣಿನ ದೃಷ್ಟಿ ಹಾಗೂ ದೇಹದ ಸರ್ವಾಂಗಗಳು, ಮಾಂಸ ಖಂಡಗಳು ಹಾಗೂ ಮೂಳೆಗಳು ಸದೃಢವಾಗುತ್ತವೆ. ಒಳ್ಳೆಯ ಸಂಸ್ಕಾರ ಕಲಿಸುತ್ತದೆ ಮತ್ತು ಮನಸ್ಸು ಏಕಾಗ್ರತೆಯಿಂದ ಇರುತ್ತದೆ ಎಂದು ವಿದುಷಿ ಭರತನಾಟ್ಯ ಶಿಕ್ಷಕಿ ವಾಣಿಶ್ರೀ ವಿವರಿಸಿದರು.

ಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ಅಭಿನಯ ನೃತ್ಯ ಶಾಲೆಯವರು ಆಯೋಜಿಸಿದ್ದ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಕ್ಕಳ ಗೆಜ್ಜೆಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದ ಭಾರತೀಯ ಸಂಸ್ಕೃತಿಯ ಭರತನಾಟ್ಯ ವಿದ್ಯೆಯನ್ನು ವಿದೇಶಿಯರು ಕಲಿಯಲು ಭಾರತಕ್ಕೆ ಬರುತ್ತಿದ್ದಾರೆ. ಆದರೆ ಭಾರತೀಯರಲ್ಲಿ ಈ ಕಲೆಯನ್ನು ಕಲಿಯುವ ಆಸಕ್ತಿ ಕಡಿಮೆಯಾಗಿದೆ. ಪೋಷಕರು ಭರತನಾಟ್ಯ ಕಲಿಯಲು ಮಕ್ಕಳಿಗೆ ಉತ್ತೇಜಿಸುವ ಜತೆಗೆ ಸಹಕಾರ ಹಾಗೂ ಮಾರ್ಗದರ್ಶನ ನೀಡಿ, ಈ ಕಲೆಯನ್ನು ಶ್ರೀಮಂತಗೊಳಿಸಿ ಎಂದು ವಿನಂತಿಸಿದರು.

ಸಾಹಿತಿ ನಾಗೇಶ್ ಕೌಂಡಿನ್ಯ ಮಾತನಾಡಿ, ವಿದೇಶಿಯರೊಬ್ಬರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭರತನಾಟ್ಯ ವೀಕ್ಷಿಸಿ, ಈ ಕಲೆಯನ್ನು ನೋಡಿದ ನಾನು ಕಳೆದೇ ಹೋಗಿದ್ದೆ. ಇಂತಹ ಅದ್ಭುತ ಕಲೆ ಭಾರತದಲ್ಲಿ ಮಾತ್ರ ಇದೆ. ಇದನ್ನು ವಿದೇಶಗಳಿಗೂ ಪರಿಚಯಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.ಭರತನಾಟ್ಯ ಶಿಕ್ಷಕಿ ಅಕ್ಷತಾ ಮಾತನಾಡಿ, ಹೊಳೆನರಸೀಪುರದಂತಹ ಸ್ಥಳದಲ್ಲಿ ಭರತನಾಟ್ಯಕ್ಕೆ ಒಳ್ಳೆಯ ಮಾನ್ಯತೆ ಇದೆ. ಭರತನಾಟ್ಯ ಕಲೆಯಲು ಮಕ್ಕಳು ಆಸಕ್ತಿ ಹೊಂದಿದ್ದಾರೆ. ಅವರಿಗೆ ಪೋಷಕರು ಪ್ರೋತ್ಸಾಹ ನೀಡಿ ಎಂದು ವಿನಂತಿಸಿದರು. ಮೃದಂಗ ವಾದಕ ಶ್ರೀಧರ್‌, ತಬಲವಾದಕ ಭಗವಾನ್, ಮಂಜುನಾಥ್ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್‌. ಬಿ. ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ಅರ್ಪಿತಾ ಸ್ವಾಗತಿಸಿದರು ಹಾಗೂ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯೆ ಅಶ್ವತಿ ಅವರ ಭರತನಾಟ್ಯ ಮೆಚ್ಚುಗೆ ಗಳಿಸಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ಆಕರ್ಷಕವಾಗಿ ಮೂಡಿ ಬಂದಿತು.