ಸಾರಾಂಶ
- ಹರಪನಹಳ್ಳಿ ತಾಲೂಕು ಚಿಗಟೇರಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಉದ್ಘಾಟಿಸಿದ ದಾವಣಗೆರೆ ಸಂಸದೆ
- - -- ಡಾ.ಶಾಮನೂರು ಶಿವಶಂಕರಪ್ಪ ಜನ್ಮದಿನ ಪ್ರಯುಕ್ತ ಎಸ್.ಎಸ್. ಕೇರ್ ಟ್ರಸ್ಟ್ ಸಂಕಲ್ಪ
- ಮುಂದಿನ ತಿಂಗಳು ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಆರೋಗ್ಯ ಶಿಬಿರ- ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಲು ದಾವಣಗೆರೆ ಬಾಪೂಜಿ ಆರೋಗ್ಯ ಕಾರ್ಡ್ ಸೌಲಭ್ಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ 94ನೇ ಜನ್ಮದಿನದ ಅಂಗವಾಗಿ ಎಸ್ಎಸ್ ಕೇರ್ ಟ್ರಸ್ಟ್ನಿಂದ ಆರೋಗ್ಯ ಶಿಬಿರಗಳನ್ನು ನಡೆಸಲು ಸಂಕಲ್ಪ ಮಾಡಲಾಗಿದೆ. ಇದರಿಂತೆ ಪ್ರತಿ 2 ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ನಡೆಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಭಾನುವಾರ ಎಸ್.ಎಸ್. ಕೇರ್ ಟ್ರಸ್ಟ್ನಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ತಿಂಗಳು ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಆಯೋಜಿಸುತ್ತೇವೆ ಎಂದರು.
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಹೆರಿಗೆ ಮಾಡಿಸುವುದು, ಡಯಾಲಿಸಿಸ್ ಈ ಮೂರನ್ನೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಿಗೆ ಉಚಿತವಾಗಿ ಮಾಡಲಾಗುವುದು. ಈಗಾಗಲೇ 20 ಸಾವಿರಕ್ಕೂ ಅಧಿಕ ಫಲಾನುಭವಿಗಳು ಎಸ್.ಎಸ್. ಕೇರ್ ಟ್ರಸ್ಟ್ ಶಿಬಿರದ ಸದುಪಯೋಗ ಪಡೆದಿದ್ದಾರೆ ಎಂದು ಹೇಳಿದರು.ಆರೋಗ್ಯಕರ ಶಿಸ್ತುಬದ್ಧ ಜೀವನಶೈಲಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಲ್ಲದೇ, ರಿಯಾಯಿತಿ ದರದಲ್ಲಿ ದಾವಣಗೆರೆ ಬಾಪೂಜಿ ಆರೋಗ್ಯ ಕಾರ್ಡ್ ನೀಡುತ್ತೇವೆ. ಈ ಕಾರ್ಡಿನಲ್ಲಿ ಒಳರೋಗಿ ಸಾಮಾನ್ಯ ಕೊಠಡಿ, ಹೊರರೋಗಿ ಸಮಾಲೋಚನೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗೆ ಶೇ.20, ಶೇ.10ರಷ್ಟು ರಿಯಾಯಿತಿ ಇರುತ್ತದೆ ಎಂದು ಅವರು ತಿಳಿಸಿದರು.
ಇದೀಗ ದಾವಣಗೆರೆಯಲ್ಲಿ ಪದವೀಧರರಿಗೆ ಉದ್ಯೋಗ ತರಬೇತಿ ಸ್ಪರ್ಧಾತ್ಮಕ ತರಬೇತಿಗಾಗಿ ಸಂಕಲ್ಪ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯ ಇದಾಗಿದೆ. ಪ್ರವೇಶ ಪರೀಕ್ಷೆ ನಡೆಸಿ ಅದರಲ್ಲಿ 300 ಜನರನ್ನು ಆಯ್ಕೆ ಮಾಡಿ ತರಬೇತಿಯನ್ನು ನೀಡಲಾಗುವುದು ಎಂದು ಡಾ.ಪ್ರಭಾ ವಿವರಿಸಿದರು.ಗೃಹ ಆರೋಗ್ಯ ಎಂಬ ಕಾರ್ಯಕ್ರಮವನ್ನು ಸರ್ಕಾರ ಜಾರಿ ಮಾಡಿದೆ. ಅದರಲ್ಲಿ ವೈದ್ಯರು ಆಶಾ ಕಾರ್ಯಕರ್ತೆಯರೊಂದಿಗೆ ಮನೆಮನೆಗೆ ತೆರಳಿ ಬಿಪಿ, ಶುಗರ್, ಕಣ್ಣು, ಕಾಲುಗಳ ಪರೀಕ್ಷೆ ನಡೆಸಿ ಸಲಹೆ ನೀಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ಪ್ರಸ್ತುತ ಒತ್ತಡದ ಜೀವನಶೈಲಿಯಲ್ಲಿ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ನೀಡಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ, ಮೈ.ರಾಮಣ್ಣ, ದೇವೇಂದ್ರಗೌಡ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಗೌಡ, ತಾಪಂ ಮಾಜಿ ಸದಸ್ಯ ಮೈದೂರು ರಾಮಣ್ಣ, ಪುರಸಭಾ ಸದಸ್ಯರಾದ ಲಾಟಿ ದಾದಾಪೀರ್, ವಸಂತಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಜಪ್ಪ, ನಿರ್ದೆಶಕರಾದ ಮುತ್ತಿಗೆ ಜಂಬಣ್ಣ, ಪಿ.ಬಿ.ಗೌಡ, ಕನಕನ ಬಸ್ಸಾಪುರ ಮಂಜುನಾಥ, ಗ್ರಾಪಂ ಉಪಾಧ್ಯಕ್ಷೆ ಹಾಲಮ್ಮ, ಮುಖಂಡರಾದ ದೇವೇಂದ್ರಗೌಡ, ಮುಖ್ಯ ಶಿಕ್ಷಕ ಓಬಳೇಶ, ದೈಹಿಕ ಶಿಕ್ಷಕ ಜನಾರ್ದನ ರೆಡ್ಡಿ, ಎಲ್.ಮಂಜನಾಯ್ಕ ಹಾಗೂ ಗ್ರಾಮಸ್ಥರು ಇದ್ದರು.- - -
(ಕೋಟ್) * ಆರೋಗ್ಯವೇ ಮಹಾಭಾಗ್ಯ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಡಾ.ಪ್ರಭಾ ಮಲ್ಲಿಕಾರ್ಜುನ ಚುನಾವಣೆ ಪೂರ್ವ ಪ್ರಚಾರಕ್ಕೆ ಬಂದಾಗ ಅಭಿವೃದ್ಧಿ ಜೊತೆ, ಆರೋಗ್ಯ ಶಿಬಿರ ಕುರಿತು ಆಶ್ವಾಸನೆ ನೀಡಿದ್ದರು. ಈಗ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಡಾ.ಪ್ರಭಾ ಅವರು ಹೆಚ್ಚು ಗಮನ ಸೆಳೆದಿದ್ದಾರೆ. ಆರೋಗ್ಯವೇ ಮಹಾಭಾಗ್ಯವಾಗಿದೆ. ಎಲ್ಲರೂ ಶಿಬಿರದ ಸದುಪಯೋಗ ಪಡೆಯಬೇಕು ಎಂದರು.- - -
-20ಕೆಡಿವಿಡಿ1.ಜೆಪಿಜಿ:ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಎಂ.ವಿ.ಅಂಜಿನಪ್ಪ, ಕುಬೇರಪ್ಪ, ಮೈ.ರಾಮಣ್ಣ , ದೇವೇಂದ್ರಗೌಡ ಇತರರು ಇದ್ದರು.