ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ, ಆರೋಗ್ಯವಂತರಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಜೆಎಸ್ಎಸ್ ಆಸ್ಪತ್ರೆಯ ಸಹಯೋಗದೊಂದಿಗೆ ರೋಟರಿ ಸಂಸ್ಥೆ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಶರೀರ ಎಂದ ಮೇಲೆ ಆರೋಗ್ಯ ಹಾಗೂ ಅನಾರೋಗ್ಯ ಜೊತೆಯಲ್ಲಿಯೇ ಬರುತ್ತವೆ. ಆಯಾ ಕಾಲಕ್ಕೆ ತಪಾಸಣೆಗೆ ಒಳಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಜೀವನದಲ್ಲಿ ಶಿಸ್ತು ಮತ್ತು ಸಮತೋಲಿತ ಆಹಾರ ಕ್ರಮ ಅನುಸರಿಸಿದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ, ಒಮ್ಮೆ ಏರುಪೇರಾದಲ್ಲಿ ಉತ್ಸಾಹ ಕಡಿಯಾಗುತ್ತದೆ. ಮನುಷ್ಯ ಇರುವಷ್ಟು ದಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು, ಇದಕ್ಕೆ ನಮ್ಮ ಜೀವನ ಶೈಲಿ, ದಿನನಿತ್ಯದ ಚಟುವಟಿಕೆಗಳು, ಆಹಾರದಲ್ಲಿ ರೀತಿ ನೀತಿಗಳು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಜೀವನದಲ್ಲಿ ಶಿಸ್ತುನ್ನು ಅಳವಡಿಸಿಕೊಂಡು ಆಹಾರ ಕ್ರಮದಲ್ಲಿ ನಿಯಮಿತವಾಗಿದ್ದರೆ ರೋಗ ಬರುವುದನ್ನು ತಡೆಗಟ್ಟಬಹುದು. ರೋಗಗಳಲ್ಲಿ 2 ವಿಧ ಅನುವಂಶಿಕ ರೋಗಗಳು, ನಾವೇ ಬರಿಸಿಕೊಳ್ಳುವ ರೋಗಗಳು ಇದನ್ನು ಔಷಧದಿಂದ ಗುಣಪಡಿಸಿಕೊಳ್ಳಬಹುದು. ಕೆಲವೊಮ್ಮೆ ಜೀವನ ಶೈಲಿಯಿಂದ ತಾವೇ ರೋಗ ಬರಮಾಡಿಕೊಳ್ಳುತ್ತಾರೆ. ಇದರಿಂದ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮನುಷ್ಯ 40 ವರ್ಷವಾದ ನಂತರ ಕಾಯಿಲೆ ಇಲ್ಲದಿದ್ದರೂ ಸಹ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಇದರಿಂದ ನಮಗೆ ರೋಗ ಇಲ್ಲ ಎಂಬುದು ಖಾತ್ರಿಯಾಗುವ ಜೊತೆಗೆ ಆತ್ಮವಿಶ್ವಾಸ ಮೂಡಲಿದೆ ಎಂದು ಅವರು ತಿಳಿಸಿದರು.ಸುಮಾರು 600ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಗಾದರು. ತಪಾಸಣೆಗೆ ಒಳಗಾದ ರೋಗಿಗಳಿಗೆ ರೋಟರಿ ನಂಜನಗೂಡು ಮತ್ತು ಔಷಧ ಮಾರಾಟಗಾರ ಸಂಘದಿಂದ ಉಚಿತವಾಗಿ ಸುಮಾರು 15 ಸಾವಿರದಷ್ಟು ಔಷಧಗಳನ್ನು ನೀಡಲಾಯಿತು.
ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಸಮಾಜ ಸೇವಕರಾದ ಯು.ಎನ್. ಪದ್ಮನಾಭರಾವ್, ಜಿಪಂ ಮಾಜಿ ಸದಸ್ಯ ಎಸ್.ಎಂ. ಕೆಂಪಣ್ಣ, ಮುಖಂಡರಾದ ಕುಂಬ್ರಳ್ಳಿ ಸುಬ್ಬಣ್ಣ, ರೋಟರಿ ಸಂಸ್ಥೆಯ ಅಧ್ಯಕ್ಷ ರಮೇಶ್, ಪ್ರಕಾಶ್ ಚಂದ್ ಜೈನ್, ರೋಟರಿ ಕೆ.ಜಿ. ರಾಮಚಂದ್ರು, ಕೆ.ವಿ. ಸುರೇಂದ್ರ, ಜೆಎಸ್ಎಸ್ ಮಲ್ಲಿಕಾರ್ಜುನಪ್ಪ, ಡಿವೈಎಸ್ಪಿ ಎಸ್. ರಘು, ಡಾ. ಶ್ರೀಕಾಂತ್, ಡಾ. ಧರ್ಮರಾಜ್, ಆರ್.ವಿ. ಮಹದೇವಸ್ವಾಮಿ, ವಕೀಲ ನಂಜುಂಡಸ್ವಾಮಿ, ರೇಣುಕಾಪ್ರಸಾದ್, ಬಾಬುಲಾಲ್, ಅರವಿಂದ್, ದಿನೇಶ್, ರವಿ, ಪ್ರಸಾದ್ ಇದ್ದರು.