ಸಾರಾಂಶ
ಮಂಗಳವಾರ ಸುರಿದ ಮಳೆಯಿಂದ ತಾಲೂಕಿನ ಯಾ.ಸ. ಹಡಗಲಿ ಮತ್ತು ಕೌಜಗೇರಿ ಮಧ್ಯ ತುಂಬಿ ಹರಿಯುತ್ತಿದ್ದ ನಿಚ್ಚನಕೇರಿ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಈ ಅವಘಡ
ರೋಣ: ತಾಲೂಕಿನ ಯಾ.ಸ. ಹಡಗಲಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಮುಗಿಸಿಕೊಂಡು ಬೈಕ್ನಲ್ಲಿ ಬರುತ್ತಿದ್ದ ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿಗಳು ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದು, ಇಬ್ಬರು ಬಚಾವಾಗಿದ್ದರೆ, ಮಹಿಳೆಯೋರ್ವರು ನಾಪತ್ತೆಯಾಗಿದ್ದಾಳೆ. ಶೋಧ ಕಾರ್ಯ ನಡೆಯುತ್ತಿದೆ.
ಬಚಾವ್ ಆಗಿರುವ ವೀರಸಂಗಯ್ಯ ಹಿರೇಮಠ ಮತ್ತು ಬಸವರಾಜ ಕಡಪಟ್ಟಿ ಅವರನ್ನು ರೋಣ ಪಟ್ಟಣದ ಭಾರತರತ್ನ ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರು ಪಾಲಾಗಿರುವ ಬಸಮ್ಮ ಗುರಿಕಾರ ( 35) ಅವರ ಶೋಧಕಾರ್ಯ ಮುಂದುವರೆದಿದೆ.ಮಂಗಳವಾರ ಸುರಿದ ಮಳೆಯಿಂದ ತಾಲೂಕಿನ ಯಾ.ಸ. ಹಡಗಲಿ ಮತ್ತು ಕೌಜಗೇರಿ ಮಧ್ಯ ತುಂಬಿ ಹರಿಯುತ್ತಿದ್ದ ನಿಚ್ಚನಕೇರಿ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಈ ಅವಘಡ ಸಂಭವಿಸಿದೆ.
ಬೆಳವಣಕಿ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರೋಗ್ಯ ಕೇಂದ್ರ ನಿರೀಕ್ಷಣಾಧಿಕಾರಿ ವೀರಸಂಗಯ್ಯ ಹಿರೇಮಠ, ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ ಕಡಪಟ್ಟಿ, ಬೆಳವಣಕಿ ಉಪ ಕೇಂದ್ರ ವ್ಯಾಪ್ತಿಯ ಕೌಜಗೇರಿ ಪ್ರಾಥಮಿಕ ಕೇಂದ್ರದಲ್ಲಿ ಆರೋಗ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಸಮ್ಮ ಗುರಿಕಾರ ತಾಲೂಕಿನ ಯಾ.ಸ. ಹಡಗಲಿ ಗ್ರಾಮದಲ್ಲಿ ಜರುಗಿದ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.ಮೂವರು ಸಿಬ್ಬಂದಿ ಶಿಬಿರ ಮುಗಿಸಿಕೊಂಡು ಮಧ್ಯಾಹ್ನ 2.30 ರ ಸುಮಾರಿಗೆ ಯಾ.ಸ. ಹಡಗಲಿ ಗ್ರಾಮದಿಂದ ಕೌಜಕೇರಿ ಗ್ರಾಮ ಮಾರ್ಗವಾಗಿ ಬೆಳವಣಕಿಗೆ ಮೂವರು ಸಿಬ್ಬಂದಿ ಒಂದೇ ಬೈಕಿನಲ್ಲಿ ವಾಪಸ್ ಬರುತ್ತಿದ್ದರು ಎನ್ನಲಾಗಿದೆ.
ಈ ವೇಳೆ ರಭಸವಾಗಿ ಹರಿಯುತ್ತಿದ್ದ ನಿಚ್ಚನಕೇರಿ ಹಳ್ಳ ದಾಟಲು ಯತ್ನಿಸಿದಾಗ ಆಯ ತಪ್ಪಿ ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ನಾಗರಾಜ.ಕೆ ಅವರು, ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಿದ್ದು, ಸಂಜೆ 7 ಗಂಟೆವರೆಗೂ ನಡೆದಿದ್ದು ನೀರು ಪಾಲಾದ ಸಿಬ್ಬಂದಿ ಪತ್ತೆಯಾಗಿಲ್ಲ. ಕತ್ತಲಾದರಿಂದ ಶೋಧ ಕಾರ್ಯ ಸ್ಥಗೀತಗೊಂಡಿದೆ.