ಸಾರಾಂಶ
ಗಜೇಂದ್ರಗಡ ಪಟ್ಟಣದ ಸಮೀಪದ ಚಿಲಝರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದ ಶಾಲೆಗೆ ಹಾಗೂ ಗಾಯಾಳುಗಳ ಮನೆಗೆ ಕಾಂಗ್ರೆಸ್ ಮುಖಂಡರ ನಿಯೋಗ ಮಂಗಳವಾರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಗಜೇಂದ್ರಗಡ: ಪಟ್ಟಣದ ಸಮೀಪದ ಚಿಲಝರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದ ಶಾಲೆಗೆ ಹಾಗೂ ಗಾಯಾಳುಗಳ ಮನೆಗೆ ಕಾಂಗ್ರೆಸ್ ಮುಖಂಡರ ನಿಯೋಗ ಮಂಗಳವಾರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ತಾಲೂಕಿನಲ್ಲಿ ಸುರಿದ ಮಳೆಯಿಂದ ಕೆಲ ಕಟ್ಟಡಗಳು ದುರಸ್ತಿಗೆ ತಲುಪಿದ್ದರ ವರದಿ, ಕಳೆದ ಹಾಗೂ ಪ್ರಸಕ್ತ ವರ್ಷದಲ್ಲಿ ಶಾಲಾ ದುರಸ್ತಿಗೆ ಬಂದಿರುವ ಮಾಹಿತಿಯನ್ನು ಪಡೆದ ಮುಖಂಡರ ನಿಯೋಗವು ಘಟನೆಯಲ್ಲಿ ಗಾಯಗೊಂಡ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ ವಿಚಾರಿಸಿದರು. ಬಳಿಕ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಪಡೆದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದ ತರಗತಿ ಹಾಗೂ ಇನ್ನಿತರ ಕೊಠಡಿಗಳನ್ನು ಪರಿಶೀಲಿಸಿದ ನಿಯೋಗವು ಶಾಲಾ ಮುಖ್ಯಗುರು ಅವರಿಗೆ ಎಷ್ಟು ವರ್ಷದ ಕಟ್ಟಡ, ಶಿಥಿಲಗೊಂಡಿದ್ದ ಕಟ್ಟಡದ ಬಗ್ಗೆ ಶಿಕ್ಷಣ ಇಲಾಖೆಗೆ ನೀಡಿದ ಮಾಹಿತಿ ಹಾಗೂ ಶಿಕ್ಷಣ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಚರ್ಚಿಸಿದರು. ಬಳಿಕ ಶಾಲಾ ಶಿಕ್ಷಕರಿಗೆ ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಪಾಠ, ಪ್ರವಚನ ಮಾಡದಂತೆ ತಾಕೀತು ಮಾಡಲು ಸೂಚಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್ ಹಾಗೂ ಸಿದ್ದಣ್ಣ ಬಂಡಿ, ಎಚ್.ಎಸ್.ಸೋಂಪುರ, ದುರಗಪ್ಪ ಮುಧೋಳ, ಅರಿಹಂತ ಬಾಗಮಾರ, ಶ್ರೀಧರ ಗಂಜಿ, ಹಸನ ತಟಗಾರ, ಶ್ರೀಕಾಂತ ತಾಳಿಕೋಟಿ, ಸಿಆರ್ಪಿ ಪ್ರಕಾಶ ಅಂಬೋರೆ ಇದ್ದರು."ಪಟ್ಟಣದ ಸಮೀಪದ ಚಿಲಝರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರ ನಿಯೋಗವು ಘಟನೆ ಕುರಿತು ಸಮಗ್ರ ಮಾಹಿತಿ ಪಡೆದರು. ಶಾಸಕ ಜಿ.ಎಸ್. ಪಾಟೀಲ ದೂರವಾಣಿ ಮೂಲಕ ಮಾಹಿತಿ ಆಲಿಸಿ ಈಗಾಗಲೇ ಬಿಇಒ ಹಾಗೂ ಸಂಬಂಧಿಸಿದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ತ್ವರಿತಗತಿಯಲ್ಲಿ ಗಜೇಂದ್ರಗಡ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಶಾಲೆಗಳ ದುರಸ್ತಿಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು ಗಜೇಂದ್ರಗಡ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು.