ಕೋವಿಡ್ ನಂತರ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ: ಡಾ.ಮಾದೇಶ್

| Published : Jul 07 2025, 11:48 PM IST

ಸಾರಾಂಶ

ದೈನಂದಿನ ಜೀವನದಲ್ಲಿ ಗ್ರಾಮೀಣ ಜನರು ಆರೋಗ್ಯವನ್ನು ಜಾಗೃತಿಯಿಂದ ನೋಡಿಕೊಳ್ಳಬೇಕು, ಉತ್ತಮ ಆಹಾರ, ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಅನಾರೋಗ್ಯ ಕಂಡ ತಕ್ಷಣವೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು, ಉದಾಸೀನ ಮಾಡುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೋವಿಡ್ ನಂತರದ ದಿನಗಳಲ್ಲಿ ಆರೋಗ್ಯಕ್ಕೆ ಎಲ್ಲರೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಎಸ್.ಡಿ.ಜಯರಾಮ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಾದೇಶ್ ಹೇಳಿದರು.

ತಾಲೂಕಿನ ಮೊತ್ತಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ದೈನಂದಿನ ಜೀವನದಲ್ಲಿ ಗ್ರಾಮೀಣ ಜನರು ಆರೋಗ್ಯವನ್ನು ಜಾಗೃತಿಯಿಂದ ನೋಡಿಕೊಳ್ಳಬೇಕು, ಉತ್ತಮ ಆಹಾರ, ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಅನಾರೋಗ್ಯ ಕಂಡ ತಕ್ಷಣವೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು, ಉದಾಸೀನ ಮಾಡುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ ಎಂದು ನುಡಿದರು.

ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಡಾ.ನೀಲಕಂಠ, ಹಳ್ಳಿಗಳು ವೃದ್ಧಾಶ್ರಮಗಳಂತೆ ಕಾಣುತ್ತಿವೆ. ಯುವ ಸಮುದಾಯ ನಗರ-ಪಟ್ಟಣಗಳತ್ತ ಉದ್ಯೋಗ ಅರಸಿಹೋಗಿದ್ದಾರೆ. ಅವರಿಗೆ ಹಳ್ಳಿಗಳ ಅಭಿವೃದ್ದಿ, ಹಿರಿಯರ ಆರೋಗ್ಯ, ಯೋಗಕ್ಷೇಮ ಬೇಕಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯಕ, ಉದಾಸೀನ ಮಾಡಿದರೆ ದೊಡ್ಡ ಅನಾರೋಗ್ಯ ಸೃಷ್ಠಿಯಾಗುತ್ತದೆ, ವೈದ್ಯರ ಸಲಹೆ, ಮಾರ್ಗದರ್ಶನದಲ್ಲಿ ಅರೋಗ್ಯವನ್ನು ಸುಧಾರಣೆಯಲ್ಲಿ ಇರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ವೈದ್ಯರಾದ ಡಾ.ಮಾದೇಶ್, ಡಾ.ಸರ್ವಮಂಗಳ, ಡಾ.ಮಧುನಂದನ್, ಡಾ. ಲಕ್ಷ್ಮೀಶ್, ಡಾ.ಸೌಮ್ಯ ಅವರನ್ನು ಗಣ್ಯರು ಅಭಿನಂದಿಸಿ ಸನ್ಮಾನಿಸಿದರು. ನಂತರ ಸುಮಾರು ೫೦೦ಕ್ಕೂ ಹೆಚ್ಚು ಜನರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ಪರೀಕ್ಷೆ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಪ್ರೊ.ಮರಿಯಯ್ಯ, ಕೊತ್ತತ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಮಧು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್‌ಕುಮಾರ್, ಕಿರಣ ಸ್ಪರ್ಶ ಟ್ರಸ್ಟ್‌ನ ಅಧ್ಯಕ್ಷ ಸಚಿನ್, ಪಣಕನಹಳ್ಳಿ ಗ್ರಾಮದ ಮುಖಂಡ ಚಾಮೇಗೌಡ, ಯುವಮುಖಂಡ ಮೊತ್ತಹಳ್ಳಿ ಸಚಿನ್ ಮತ್ತಿತರರಿದ್ದರು.