ಸಾರಾಂಶ
ನಗರದ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳು ಆರೋಗ್ಯ ವಿಭಾಗದ ಸಹಯೋಗದೊಂದಿಗೆ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಅಂಗವಾಗಿ ಆರೋಗ್ಯ ಉಚಿತ ತಪಾಸಣೆ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳು ಆರೋಗ್ಯ ವಿಭಾಗದ ಸಹಯೋಗದೊಂದಿಗೆ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಅಂಗವಾಗಿ ಆರೋಗ್ಯ ಉಚಿತ ತಪಾಸಣೆ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು.ಆರ್ಸಿಎಚ್ ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿ, ಆರೋಗ್ಯವೇ ಜೀವನದ ದೊಡ್ಡ ಭಾಗ್ಯ, ಆರೋಗ್ಯವಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಸಾಧನೆಯ ಮೈಲುಗಲ್ಲು ಕ್ರಮಿಸಲು ಆರೋಗ್ಯದ ಮೆಟ್ಟಿಲು ಅತ್ಯಂತ ಅವಶ್ಯ. ವಿದ್ಯಾರ್ಥಿ-ಯುವಜನರು ಇತ್ತೀಚಿಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿಲ್ಲ. ಕುರಕಲು ತಿನಿಸುಗಳಿಗೆ ಅಂಟಿಕೊಂಡು ಉತ್ತಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಆಹಾರ ಪದ್ಧತಿ, ವ್ಯಾಯಾಮ, ಯೋಗ, ಸ್ವಚ್ಛತೆಯಂತಹ ಶಿಸ್ತುಬದ್ಧ ಜೀವನಶೈಲಿ ಮೂಲಕ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದರು.
ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿ ಸೇರಿದಂತೆ ೩೪ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಹದಿಹರೆಯದವರ ಆರೋಗ್ಯದಲ್ಲಿ ಆಗುವಂತಹ ಬದಲಾವಣೆ, ಅದಕ್ಕೆ ನಿವಾರಣೆಯ ಕ್ರಮಗಳ ಬಗ್ಗೆ ಸಹ ವಿವರವಾದ ಮಾಹಿತಿಯನ್ನು ತಜ್ಞ ವೈದ್ಯರು ಸಮಗ್ರವಾಗಿ ವಿವರಿಸಿದರು.ಮನೋರೋಗ ತಜ್ಞ ವೈದ್ಯ ಡಾ.ಮಂಜುನಾಥ ಮಸಳಿ ಮನೋರೋಗದ ಬಗ್ಗೆ ಸ್ವವಿವರವಾದ ಮಾಹಿತಿ ನೀಡಿದರು. ಡಾ.ಸುಮಾ ಮಮದಾಪೂರ, ಸಾವಿತ್ರಿ ಹಿಪ್ಪರಗಿ, ಡಾ.ಮಂಜುನಾಥ ಪೋಳ, ಸಂತೋಷ ರಾಠೋಡ ಮೊದಲಾದವರು ಉಪಸ್ಥಿತರಿದ್ದರು.