ಸಾರಾಂಶ
ದೇಶದಲ್ಲಿ ಈಗಾಗಲೇ 20 ಏಮ್ಸ್ ಶಿಕ್ಷಣ ಸಂಸ್ಥೆಗಳಿದ್ದು, ೫ ಏಮ್ಸ್ ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದ್ದು
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ ಉತ್ತರ ಕರ್ನಾಟಕ ಭಾಗಕ್ಕೆ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು (ಏಮ್ಸ್) ಮಂಜೂರು ಮಾಡಬೇಕೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಮನವಿ ಸಲ್ಲಿಸಿರುವುದಾಗಿ ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ 20 ಏಮ್ಸ್ ಶಿಕ್ಷಣ ಸಂಸ್ಥೆಗಳಿದ್ದು, ೫ ಏಮ್ಸ್ ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಏಮ್ಸ್ ಸಂಸ್ಥೆ ಆಗಬೇಕಾಗಿದೆ. ನಾನು ಸೇರಿದಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬ್ರಿಜೇಶ್ ಚೌಟಾ, ಪ್ರಭಾ ಮಲ್ಲಿಕಾರ್ಜುನ, ಜಿ. ಕುಮಾರ್ ನಾಯಕ್ ಎಲ್ಲರೂ ಸೇರಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಒಂದು ಏಮ್ಸ್ ಸಂಸ್ಥೆ ಸ್ಥಾಪನೆ ಮಾಡಲು 1500 ಕೋಟಿ ರೂ. ಬೇಕಾಗುತ್ತದೆ. ಬೆಂಗಳೂರಿನ ನಿಮ್ಹಾನ್ಸ್ ಆವರಣದಲ್ಲಿ ಪಾಲಿ ಟ್ರಾಮಕೇರ್ ಸೆಂಟರ್ ಗೆ ಅನುಮೋದನೆ ಕೊಡಲು ಕೇಳಿದ್ದೇವೆ. ಹಾಗೂ ರಾಜ್ಯದ ಎಕ್ಸ್ ಪ್ರೆಸ್ ಹೈವೆಗಳಲ್ಲಿ 125 ಕಿ.ಮೀ.ಗೆ ಒಂದು ಪಾಲಿಟ್ರಾಮ ಕ್ಲಿನಿಕ್ ಸ್ಥಾಪಿಸಲು ಮನವಿ ಮಾಡಿದ್ದು, ಈ ಎಲ್ಲಾ ಬೇಡಿಕೆಗಳಿಗೂ ಆರೋಗ್ಯ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರು ಮೆಟ್ರೋ 3ನೇ ಫೇಸ್ ಗೆ 15140 ಕೋಟಿ ರೂ. ಅನುಮೋದನೆ ದೊರೆತಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಡಾ.ಜೆ.ಬಿ. ನರೇಂದ್ರ, ಆಪ್ತ ಸಹಾಯಕ ಪರಮೇಶ್, ಅವಿನಾಶ್ ಕೆಸ್ತೂರ್ ಇದ್ದರು.