ಮಂಗಳೂರು: ವೈದ್ಯರಿಗೆ ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಇಂದು ಅನೇಕ ಸವಾಲುಗಳಿವೆ. ಪದವೀಧರರು ಕೇವಲ ವೈದ್ಯರಾಗಿಯೇ ಉಳಿಯದೆ ಇಂದಿನ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನಡೆಯಬೇಕು. ಅವುಗಳ ನಡುವೆ ದೃಢತೆ, ಆತ್ಮಸ್ಥೈರ್ಯ ವೈದ್ಯಕೀಯ ರಂಗದಲ್ಲಿ ಮುನ್ನಡೆಯಲು ಸಾಧ್ಯವಿದೆ ಎಂದು ಕರ್ನಾಟಕ ವಿವಿಯ ಕುಲಪತಿ ಡಾ.ಎ.ಎಂ.ಖಾನ್ ಹೇಳಿದರು.

ಶುಕ್ರವಾರ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಫಾದರ್ ಮುಲ್ಲರ್‌ ಮೆಡಿಕಲ್, ಅಲೈಡ್ ಹೆಲ್ತ್ ಅಂಡ್‌ ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು. ರಾಜ್ಯ ವೈದ್ಯಕೀಯ ನಿರ್ದೇಶನಾಲಯದ ಜಂಟಿ ನಿರ್ದೇಶಕ ಡಾ.ಎಸ್.ವೆಂಕಟ ರಾಘವ ಮಾತನಾಡಿ, ಇಂದು ಸಾಕಷ್ಟು ಹೊಸತನದೊಂದಿಗೆ ಜಗತ್ತು ಮುಂದುವರೆದಿದೆ. ನವೀನ ತಂತ್ರಜ್ಞಾನಗಳು ರೋಗಿಗಳಿಗೆ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಂತೆ ಮಾಡಿದ್ದು, ಇಂತಹ ಸಂದರ್ಭದಲ್ಲಿ ಪರಿಪೂರ್ಣ ಜ್ಞಾನ ಹೊಂದಿರಬೇಕು. ಅಸಮರ್ಪಕ ಮಾಹಿತಿಯೊಂದಿಗೆ ರೋಗಿಗಳ ಮುಂದೆ ತಲೆ ತಗ್ಗಿಸುವಂತಾಗಬಾರದು ಎಂದರು.ಫಾದರ್ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ಹಾಗೂ ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ರೋಗಿಗಳಲ್ಲಿರುವ ಆತಂಕವನ್ನು ದೂರಮಾಡಬೇಕು. ಅವರಿಗೆ ಭರವಸೆ, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ ವೈದ್ಯರ ಮಾತುಗಳು ಗುಣಪಡಿಸುವ ಶಕ್ತಿ ಹೊಂದಿರಬೇಕು. ವೈದ್ಯರ ಕೈಗಳಿಗೆ ಮಾತ್ರವೇ ಗುಣಪಡಿಸುವ ವಿಶೇಷ ಶಕ್ತಿ ಹೊಂದಿರುತ್ತದೆ. ನಿಮ್ಮಿಂದ ಸಮಾಜದಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುವ ಜತೆಗೆ ಜನ ಆರಾಮದಾಯಕ ಜೀವನ ನಡೆಸಲು ಸಾಧ್ಯವಾಗಲಿ ಎಂದರು. ಸುಮಾರು 518 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಫ್ ಎಂ ಸಿಐ ರೆಸಿಡೆನ್ಸ್ ಗೋಲ್ಡ್ ಮೆಡಲನ್ನು ಡಾ.ಕೃತಿಕಾ ಸಾಗ್ರಿ ನಾಯಕ್ ಅವರಿಗೆ ನೀಡಿ ಗೌರವಿಸಲಾಯಿತು. ಎಫ್ ಎಂಸಿಒಪಿಯ ಬೆಸ್ಟ್ ಔಟ್ ಗೋಯಿಂಗ್ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಪದವೀಧರೆಗಾಗಿ ನೀಡುವ ದಿ.ಜಾನ್ ಲಿನು ವರ್ಗೀಸ್ ಸ್ಮಾರಕ ಪ್ರಶಸ್ತಿಯನ್ನು ಇಶ್ರತ್ ಫಾತಿಮಾ ಅಬ್ಬಾಸಿ ಪಡೆದರು. ಎಫ್ ಎಂ ಸಿಒಎ ಎಚ್ ಎಸ್ ಬೆಸ್ಟ್ ಔಟ್ ಗೋಯಿಂಗ್ ಬ್ಯಾಚುಲರ್ ಪದವೀಧರೆ ಪ್ರಶಸ್ತಿಯನ್ನು ಮರಿಯಮ್ ಜುಹಾಮ್ ಪಿ.ಎಸ್. ಅವರಿಗೆ ನೀಡಲಾಯಿತು. ವಿವಿಧ ರ್‍ಯಾಂಕ್‌ ವಿಜೇತರನ್ನು ಸನ್ಮಾನಿಸಲಾಯಿತು.ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ.ಫಾವುಸ್ತಿನ್ ಲೂಕಸ್ ಲೋಬೊ ಪ್ರಸ್ತಾವಿಸಿ ಸ್ವಾಗತಿಸಿದರು.ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಗಳಾದ ರೆ.ಫಾ.ಮೈಕಲ್ ಸಾಂತುಮಾಯೊರ್, ಡೀನ್ ಡಾ. ಆ್ಯಂಟನಿ ಸಿಲ್ವನ್ ಡಿಸೋಜಾ, ವೈಸ್ ಡೀನ್ ಡಾ.ವೆಂಕಟೇಶ್ ಬಿ.ಎಂ., ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ.ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷಕ ಡಾ.ಉದಯ್ ಕುಮಾರ್, ಪ್ರಾಂಶುಪಾಲರಾದ ಡಾ.ಶಿವಶಂಕರ ಎ.ಆರ್., ಪ್ರೊ.ಚರಿಷ್ಮಾ ಡಿಸಿಲ್ವಾ ಮತ್ತಿತರರು ಇದ್ದರು.