ಅಪೌಷ್ಟಿಕತೆ ನಿವಾರಣೆಯಿಂದ ಆರೋಗ್ಯಕರ ಸಮಾಜ

| Published : Sep 03 2025, 01:00 AM IST

ಅಪೌಷ್ಟಿಕತೆ ನಿವಾರಣೆಯಿಂದ ಆರೋಗ್ಯಕರ ಸಮಾಜ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ನಗರದ ರೋಜಿಪುರ ಅಂಗನವಾಡಿ ಕೇಂದ್ರದಲ್ಲಿ ಕಸಬಾ ಹೋಬಳಿ ಒಂದನೇ ವೃತ್ತದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ದೊಡ್ಡಬಳ್ಳಾಪುರ: ನಗರದ ರೋಜಿಪುರ ಅಂಗನವಾಡಿ ಕೇಂದ್ರದಲ್ಲಿ ಕಸಬಾ ಹೋಬಳಿ ಒಂದನೇ ವೃತ್ತದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ದೊಡ್ಡಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್‌ರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹದಿಹರೆಯದ ಹೆಣ್ಣು ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಭಿಯಾನವನ್ನು 2018ರ ಮಾರ್ಚ್ 8ರಂದು ಪ್ರಧಾನಿ ನರೇಂದ್ರಮೋದಿ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ಚಾಲನೆ ನೀಡಿದ್ದರು. ಪ್ರತಿಯೊಬ್ಬ ಮಗು ಕೂಡ ಅಪೌಷ್ಟಿಕತೆಯಿಂದ ಬಳಲಬಾರದು ಎಂಬುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

ಸೆಪ್ಟೆಂಬರ್ 12ರಿಂದ ಅಕ್ಟೋಬರ್ 11 ರವರೆಗೆ ಒಂದು ತಿಂಗಳ ಕಾಲ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ರೋಜಿ ಪುರದ ಅಂಗನವಾಡಿಯಲ್ಲಿ ಪ್ರಾಸ್ತಾವಿಕವಾಗಿ ಚಾಲನೆ ನೀಡಲಾಗಿದೆ ಎಂದರು.

ಸಹಾಯಕ ಶಿಶು ಯೋಜನಾಧಿಕಾರಿ ಅರುಣ್ ಕುಮಾರ್ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ದೀರ್ಘಕಾಲದ ಆರೋಗ್ಯ ಮತ್ತು ಅಭಿವೃದ್ಧಿಗೆ ಉತ್ತಮ ಅಡಿಪಾಯವನ್ನು ನಿರ್ಮಿಸುವ ದ್ಯೇಯೋದ್ದೇಶವಾಗಿದೆ.

ಅಪೌಷ್ಟಿಕ ಮಕ್ಕಳು ಪೌಷ್ಟಿಕ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳು ದಾಖಲಾದರೆ ತಾಯಿಗೆ ನರೇಗಾ ಯೋಜನೆಯಲ್ಲಿ ದಿನಗೂಲಿ ನೀಡಲಾಗುತ್ತದೆ. ಆದ್ದರಿಂದ ಅಪೌಷ್ಟಿಕತೆಯ ಮಕ್ಕಳು ‌ಕಂಡು ಬಂದರೆ ಕೂಡಲೆ ನೋಂದಾಯಿಸಬೇಕು ಎಂದರು.

ಕಾನೂನು ಸೇವೆಗಳ ಪ್ರಾಧಿಕಾರದ ಶಶಿಕುಮಾರ್ ಮಾತನಾಡಿ, ನಮ್ಮಲ್ಲಿನ ಹಿರಿಯರು ತಯಾರು ಮಾಡುತ್ತಿದ್ದ ಸಾವಯವ ಆಹಾರ ಪದ್ದತಿಗಳು ಇಂದು ನಾವೆಲ್ಲ ಅಳವಡಿಸಿಕೊಳ್ಳಬೇಕಾಗಿದೆ. ನಮ್ಮ ಹಿರಿಯರು ಯಾವುದೇ ರಾಸಾಯನಿಕ ಬಳಸದೆ ಕೇವಲ ಕೊಟ್ಟಿಗೆ ಗೊಬ್ಬರವನ್ನ ಹಾಕಿ ಆಹಾರ ಪದಾರ್ಥಗಳನ್ನು ಬೆಳೆಯುತ್ತಿದ್ದರು. ಆದರೆ ಇಂದು ರಾಸಾಯನಿಕ ಗೊಬ್ಬರಗಳ ಬಳಕೆ‌ ಹೆಚ್ಚಾಗಿದೆ ಎಂದರು.

ಕಸಬಾ ವೃತ್ತದ ಹಿರಿಯ ಮೇಲ್ವಿಚಾರಕಿ ನಿರ್ಮಲ ಮಾತನಾಡಿ. ಮಹಿಳೆಯರು ಆಧುನಿಕತೆ ಹೊಂದಿಕೊಂಡು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆಹಾರ ಪದಾರ್ಥಗಳ ಚಟಗಳಿಗೆ ದಾಸರಾಗುತ್ತಿದ್ದಾರೆ. ಸಾಂಪ್ರಾದಯಿಕ ಆಹಾರ ಪದ್ಧತಿಯನ್ನು ಮನೆಗಳಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಲಭ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸಿಡಿಪಿಓ ರೂಪಶ್ರೀ, ಮೇಲ್ವಿಚಾರಕಿ ಮಾಲ, ಪೋಷಣ್ ಸಂಯೋಜಕರಾದ ನಿವೇದಿತಾ, ಅಂಗನವಾಡಿ ಕಾರ್ಯಕರ್ತೆಯರಾದ ಶೈಲಜಾ ಗೌಡ, ‌ನಿರ್ಮಲ ಸೇರಿದಂತೆ ಕಸಬಾ ಒಂದನೇ ವೃತ್ತದ ಕಾರ್ಯಕರ್ತೆಯರು ಸಹಾಯಕಿಯರು ಭಾಗವಹಿಸಿದ್ದರು.

ಫೋಟೋ-

2ಕೆಡಿಬಿಪಿ3- ದೊಡ್ಡಬಳ್ಳಾಪುರದ ರೋಜಿಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್‌ ಅಭಿಯಾನಕ್ಕೆ ಚಾಲನೆ ನೀಡಲಾಯಿತು.