ಸಾರಾಂಶ
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಈ ಮಾರ್ಗದ ರಸ್ತೆ ಬದಿಯಲ್ಲಿನ ಹಲವು ಮರದ ಕೊಂಬೆಗಳು ಮುರಿದು ರಸ್ತೆ ಹಾಗೂ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಇಡೀ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಲ್ಲದೇ, ರಸ್ತೆ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು. ಮಂಗಳವಾರ ಬೆಳಗ್ಗೆ ಮರದ ಕೊಂಬೆಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಫಸಲು ಬಿಟ್ಟಿದ್ದ ೫೦೦ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕುರುಳಿ ಅಪಾರ ಪ್ರಮಾಣದ ಹಾನಿಯಾಗಿದೆ.ಸಂತೆಕೊಪ್ಪಲು ಗ್ರಾಮದ ಕಾಳೇಗೌಡ ಎಂಬ ರೈತ ಬ್ಯಾಂಕ್ ಸಾಲ ಪಡೆದು ೫೦೦ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಬೆಳೆದಿದ್ದರು. ಫಸಲು ಬಿಟ್ಟಿದ್ದ ಬಹುತೇಕ ಬಾಳೆ ಗಿಡಗಳು ಬೀಸಿದ ಬಿರುಗಾಳಿಗೆ ಸಿಲುಕಿ ನೆಲಕ್ಕುರುಳಿದ ಪರಿಣಾಮ ಲಕ್ಷಾಂತರ ರು. ನಷ್ಟವಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಈ ಮಾರ್ಗದ ರಸ್ತೆ ಬದಿಯಲ್ಲಿನ ಹಲವು ಮರದ ಕೊಂಬೆಗಳು ಮುರಿದು ರಸ್ತೆ ಹಾಗೂ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಇಡೀ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಲ್ಲದೇ, ರಸ್ತೆ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು. ಮಂಗಳವಾರ ಬೆಳಗ್ಗೆ ಮರದ ಕೊಂಬೆಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ತಾಲೂಕಿನ ಹೊಣಕೆರೆ ಮತ್ತು ಬೆಳ್ಳೂರು ಹೋಬಳಿಯ ಹಲವು ಭಾಗಗಳಲ್ಲಿ ಸೋಮವಾರ ತಡರಾತ್ರಿ ಸಾಧಾರಣ ಮಳೆಯಾಗಿದ್ದರೆ, ದೇವಲಾಪುರ ಹೋಬಳಿಯ ಕೆಲ ಭಾಗಗಳಲ್ಲಿ ಬಿರುಗಾಳಿ ಸಹಿತ ತುಂತುರು ಮಳೆಯಾಗಿದೆ. ನಾಗಮಂಗಲ ಮಂಡ್ಯ ಮುಖ್ಯ ರಸ್ತೆ ಬದಿಯಲ್ಲಿ ಹಾಯ್ದು ಹೋಗಿರುವ ೧೧ಕೆವಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಬಿದ್ದು ಕರಡಹಳ್ಳಿ, ಹುಳ್ಳೇನಹಳ್ಳಿ, ಚಿಕ್ಕಯಗಟಿ, ಲಿಂಗಮ್ಮನಹಳ್ಳಿ ಸೇರಿದಂತೆ ೨೦ಕ್ಕೂ ಹೆಚ್ಚು ಗ್ರಾಮಗಳಿಗೆ ಇಡೀ ರಾತ್ರಿ ವಿದ್ಯುತ್ ಇಲ್ಲದೆ ಜನರು ತೊಂದರೆ ಅನುಭವಿಸುವಂತಾಗಿತ್ತು.