ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೋಬಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬಿರುಸಿನ ಗಾಳಿ ಮಳೆ ಮಂಗಳವಾರ ತುಸು ಕಡಿಮೆಯಾಗಿದ್ದರೂ ಅಲ್ಲಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದೆ.ಇಲ್ಲಿಗೆ ಸಮೀಪದ ಚೇಲಾವರ ಗ್ರಾಮದ ಕಾರ್ಯಪ್ಪ ಎಂಬವರ ಕಾರ್ಮಿಕರ ವಾಸವಾಗಿದ್ದ ಮನೆಗೆ ಸೋಮವಾರ ರಾತ್ರಿ ಮರ ಬಿದ್ದು ಬಹುತೇಕ ಹಾನಿಯಾಗಿದೆ. ಈ ಮನೆಯಲ್ಲಿ ತೋಟದ ಕಾರ್ಮಿಕರು ವಾಸವಾಗಿದ್ದು ಅವರು ಹಬ್ಬಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಆದ ಕಾರಣ ಯಾರೂ ಮನೆಯಲ್ಲಿ ಇಲ್ಲದೇ ಇದ್ದುದರಿಂದ ದೊಡ್ಡ ಅವಘಡಗಳಿಂದ ಪಾರಾಗಿದ್ದಾರೆ. ಮನೆಯ ಛಾವಣಿಯ ಹಂಚು ಹಾಗೂ ಮರ ಮುಟ್ಟುಗಳು, ಮತ್ತು ಮನೆಯ ವಸ್ತುಗಳು ಹಾನಿಗೀಡಾಗಿದ್ದು ಭಾರಿ ನಷ್ಟ ಸಂಭವಿಸಿದೆ.ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೌಶಿ ಕಾವೇರಮ್ಮ, ಪಂಚಾಯಿತಿ ಸದಸ್ಯ ಮುಂಡಿಯೊಳಂದ ಈರಪ್ಪ, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಸ್ವಾತಿ, ಸಹಾಯಕ ರಾಜ ಭೇಟಿ ನೀಡಿ ಪರಿಶೀಲಿಸಿದರು.ಇಲ್ಲಿಗೆ ಸಮೀಪದ ಬಲಮುರಿ ನಿವಾಸಿ ಕಾವೇರಪ್ಪ ಎಂಬವರ ಮನೆಯ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ. ಸೋಮವಾರ ರಾತ್ರಿ ಗಾಳಿ ಮಳೆಯಿಂದಾಗಿ ಮನೆಯ ಸಮೀಪದಲ್ಲಿದ್ದ ಭಾರಿ ಗಾತ್ರದ ಮರ ಒಂದು ಮುರಿದುಬಿದ್ದು ನಷ್ಟ ಸಂಭವಿಸಿದೆ.ಕರಡ ಗ್ರಾಮದ ಬೋಜಮ್ಮ ಅವರ ವಾಸದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಿಗೆ ಅಮೃತ ಭೇಟಿ ನೀಡಿ ಪರಿಶೀಲಿಸಿದರು.