ಭಾರಿ ಮಳೆ: ಬೆಳೆಹಾನಿ ಸಮೀಕ್ಷೆ ಡಿಸಿ ಸೂಚನೆ

| Published : Sep 29 2025, 01:02 AM IST

ಸಾರಾಂಶ

ಜಿಲ್ಲೆಯಲ್ಲೆ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲು ಮತ್ತು ಬೆಳೆ ಹಾನಿ ಸಮೀಕ್ಷೆ ಸಂಬAಧ ಚರ್ಚಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ಸಭೆ ಹಾಗೂ ವಿಡಿಯೋ ಸಂವಾದ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಲ್ಲೆ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲು ಮತ್ತು ಬೆಳೆ ಹಾನಿ ಸಮೀಕ್ಷೆ ಸಂಬAಧ ಚರ್ಚಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ಸಭೆ ಹಾಗೂ ವಿಡಿಯೋ ಸಂವಾದ ನಡೆಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ಹಾಗೂ ವಿಡಿಯೋ ಸಂವಾದದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸೆ.26 ಮತ್ತು ಸೆ.27ರಂದು ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಅದರಂತೆ ಕಳೆದ ಕಳೆದ ಮುರ್ನಾಲ್ಕು ದಿನಗಳಿಂದ ರಾಯಚೂರ ಜಿಲ್ಲೆಯ ಬಹುತೇಕ ಎಲ್ಲಾ ಕಡೆ ವಿಪರೀತವಾಗಿ ಮಳೆ ಸುರಿದಿದೆ. ತೀವ್ರ ಮಳೆಯಿಂದಾಗಿ ಜಿಲ್ಲಾ ವ್ಯಾಪ್ತಿಯ ಬಹುತೇಕ ಎಲ್ಲಾ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತಿರುವುದನ್ನು ತಾವು ಕ್ಷೇತ್ರ ಭೇಟಿ ವೇಳೆ ಖುದ್ದು ವೀಕ್ಷಣೆ ಮಾಡಿದ್ದು, ಹಾನಿಗೊಳಗಾದ ರೈತರಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಮಳೆಯಿಂದಾದ ಬೆಳೆಹಾನಿ ಸಮೀಕ್ಷೆಯ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಕೂಡಲೇ ಆರಂಭಿಸಿ ಯುದ್ದೋಪಾದಿಯಲ್ಲಿ ನಡೆಸಬೇಕು ಎಂದು ಕೃಷಿ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲೆ ಬೆಳೆಹಾನಿ ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ, ಹಾನಿಯಾದ ಬೆಳೆಗೆ ನ್ಯಾಯಯುತವಾಗಿ ಪರಿಹಾರ ಸಿಗುವ ಹಾಗೆ ಅಧಿಕಾರಿಗಳು ಸಮೀಕ್ಷೆಯನ್ನು ಅತ್ಯಂತ ಶ್ರದ್ಧೆಯಿಂದ ನಡೆಸಬೇಕು. ಹತ್ತಿ, ಭತ್ತ, ತೊಗರಿ, ಜೋಳ ಸೇರಿದಂತೆ ಈಗ ಬಿತ್ತನೆಯಾದ ಎಲ್ಲ ಬೆಳೆಗಳ ಹಾನಿಯ ಸಮೀಕ್ಷೆ ನಡೆಯಬೇಕು. ತೋಟಗಾರಿಕಾ ಬೆಳೆಹಾನಿಯ ಸಮೀಕ್ಷೆ ಕೂಡ ಜೊತೆಜೊತೆಗೆ ನಡೆಯಬೇಕು. ಇದಕ್ಕಾಗ ಕೃಷಿ, ತೋಟಗಾರಿಕೆ ಸೇರಿದಂತೆ ಬೇರೆ ಬೇರೆ ಇಲಾಖೆಗಳು ಸಮನ್ವಯ ಸಾಧಿಸಿ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಂಟಿ ಸಮೀಕ್ಷೆಗೆ ಸೂಚನೆ: ಮಳೆಯಿಂದಾಗಿ ಜಾನುವಾರು-ಜೀವಹಾನಿ ಸಮೀಕ್ಷೆ, ಮನೆ ಹಾನಿ ಸಮೀಕ್ಷೆ ಕೂಡ ಜೊತೆಜೊತೆಗೆ ನಡೆಯಬೇಕು. ಜಾನುವಾರು-ಜೀವಹಾನಿ ಹಾಗೂ ಮನೆ ಹಾನಿಗೆ ಕಾಲಮಿತಿ ಯೊಳಗಡೆ ಪರಿಹಾರ ಸಿಗುವಂತೆ ತುರ್ತು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ತಹಸೀಲ್ದಾರ್, ತಾಪಂ ಇಒಗಳಿಗೆ ಸೂಚನೆ: ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ಎಲ್ಲಾ ಕಡೆಗಿನ ಮಳೆಯಿಂದಾದ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಎಲ್ಲ ತಾಲೂಕುಗಳಲ್ಲಿ ಬೆಳೆಹಾನಿಯ ಸಮೀಕ್ಷಾ ಕಾರ್ಯ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸೂಕ್ತ ಮೇಲ್ವಿಚಾರಣೆ ನಡೆಸಿ ಗ್ರಾಮೀಣ ಪ್ರದೇಶದಲ್ಲಿ ಜನತೆಗೆ ಸ್ಪಂದನೆ ಸಿಗುವ ಹಾಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಮುಂಜಾಗ್ರತೆ ವಹಿಸಿ: ಮುಖ್ಯವಾಗಿ ಮಳೆಯಿಂದ ಸಂಭವಿಸಬಹುದಾದ ಪ್ರವಾಹ ಪರಿಸ್ಥಿತಿಯ ಬಗ್ಗೆ ಮುಂಜಾಗ್ರತೆ ವಹಿಸಬೇಕು. ತುರ್ತು ಕ್ರಮಗಳು, ಜನರ ಸುರಕ್ಷತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ ನೀಡುವ ಎಲ್ಲಾ ನಿರ್ದೇಶನಗಳನ್ನು ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.

ಜನತೆಗೆ ಸ್ಪಂದಿಸಿ: ಕಳೆದ ಮರ‍್ನಾಲು ದಿನಗಳಿಂದ ಇಡೀ ರಾಯಚೂರು ಜಿಲ್ಲೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಮಲೆನಾಡಿನ ರೀತಿಯಲ್ಲಿ ವಾತಾವರಣ ಕಾಣುತ್ತಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜನತೆಗೆ ಸ್ಪಂದಿಸಲೇಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು. ಜನರ ಕರೆಗಳನ್ನು ಸ್ವೀಕರಿಸಿ ಸ್ಪಂದನೆ ನೀಡಬೇಕು ಎಂದು ತಿಳಿಸಿದರು.ಜನತೆಗೆ ಮುನ್ನೆಚ್ಚರಿಕೆ ನೀಡಿ: ಜಿಲ್ಲೆಯ ಎಲ್ಲಾ ಕಡೆಗಳಲ್ಲಿನ ಹಳ್ಳಕೊಳ್ಳಗಳು ತುಂಬಿ ನದಿಯತ್ತ ಹರಿಯುತ್ತಿವೆ. ಈ ವೇಳೆ ನದಿ ನೀರಿನ ಪ್ರಮಾಣ ಏಕಾಏಕಿ ಹೆಚ್ಚಲಿದೆ. ರಭಸವಾಗಿ ಹರಿಯಲಿದೆ. ಹೀಗಾಗಿ ತುಂಗಾಭದ್ರಾ ಮತ್ತು ಕೃಷ್ಣಾ ನದಿ ತೀರದ ಜನರಿಗೆ ಮುಂಜಾಗ್ರತೆ ವಹಿಸಲು ಎಚ್ಚರಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೆಸ್ಕಾಂಗೆ ಅಧಿಕಾರಿಗಳಿಗೆ ಸೂಚನೆ: ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತಿರುವುದು ಕಾಣುತ್ತಿದೆ. ಕೆಲವು ಕಡೆಗಳಲ್ಲಿ ಜಮೀನುಗಳಲ್ಲಿನ ವಿದ್ಯುತ್ ಕಂಬಗಳು ಬಾಗಿವೆ. ಮಳೆಗಾಳಿಯಿಂದಾಗಿ ಅಲ್ಲಲ್ಲಿ ವಿದ್ಯುತ್ ತಂತಿಗಳು ಗಿಡಮರಗಳ ಮಧ್ಯೆ ಸಿಲುಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಜೆಸ್ಕಾಂ ಅಧಿಕಾರಿಗಳು, ಅವಘಡಗಳು ಸಂಭವಿಸದAತೆ ಮುಂಜಾಗ್ರತೆ ವಹಿಸಬೇಕು. ಎಲ್ಲಾ ತಾಲೂಕುಗಳಲ್ಲಿ ಸಂಚಾರ ನಡೆಸಿ ಪರಿಶೀಲಿಸಬೇಕು ಎಂದು ತಿಳಿಸಿದರು.ಅಮಾನತು ಎಚ್ಚರಿಕೆ: ಬಹುತೇಕ ವರ್ಷಗಳ ನಂತರ ರಾಯಚೂರ ಜಿಲ್ಲೆಯಲ್ಲಿ ದಾಖಲೆಯ ರೀತಿ ಮಳೆ ಬಿದ್ದಿದೆ. ಈ ವೇಳೆ ನಾವು ರೈತರು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಸ್ಪಂದನೆ ನೀಡಬೇಕು. ತೀವ್ರ ಮಳೆ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿ ಸ್ಪಂದನೆ ನೀಡುತ್ತಿಲ್ಲ ಎಂದು ದೂರುಗಳು ಬಂದಲ್ಲಿ, ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಶಿಕ್ಷೆಗೊಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರು, ತಹಸೀಲ್ದಾರರು, ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.