ಸಾರಾಂಶ
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಸಂಚಾರಕ್ಕೆ ತೊಡಕಾಗಿದೆ.
ಕನ್ನಡಪ್ರಭವಾರ್ತೆ, ಸೋಮವಾರಪೇಟೆ
ಕಳೆದ ಮೂರು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ ಸೋಮವಾರಪೇಟೆ -ತೊಳೂರುಶೆಟ್ಟಳ್ಳಿ - ಕೂತಿ ಮಾರ್ಗದ ಮುಖ್ಯ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ತೊಡಕಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.ರಸ್ತೆ ಅಗಲೀಕರಣದ ಸಲುವಾಗಿ ರಸ್ತೆ ಬದಿಯ ಚರಂಡಿಯನ್ನು ಮುಚ್ಚಿರುವುದರಿಂದ ಚರಂಡಿಯಲ್ಲಿನ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಸ್ತೆಗಳಲ್ಲಿ ಗುಂಡಿಗಳಿರುವುದರಿಂದ, ದ್ವಿ ಚಕ್ರವಾಹನ ಸವಾರರು ಬಿದ್ದು, ಎದ್ದು ಸಂಚರಿಸುತ್ತಿದ್ದಾರೆ.
ಮುಖ್ಯ ರಸ್ತೆಯ ಹೊಸಬೀಡು, ಕೂಡುರಸ್ತೆ, ತೊಳೂರುಶೆಟ್ಟಳ್ಳಿ ಯಲ್ಲಿ ರಸ್ತೆಯ ಮೇಲೆ ನೀರು ಸಂಗ್ರಹವಾಗಿದ್ದು, ಬೈಕ್ ಸವಾರರು ಕಷ್ಟಪಡುವಂತಾಗಿದೆ. ಹೊಸಬೀಡು ಗ್ರಾಮದಲ್ಲಿ ಇತೀಚೆಗೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸೇತುವೆ ಸಮೀಪದ ರಸ್ತೆಯಲ್ಲಿನ ಮೋರಿ ಕುಸಿದಿದ್ದು, ಗುಂಡಿಬಿದ್ದಿದ್ದು, ದೊಡ್ಡ ವಾಹನಗಳು ಸಂಚರಿಸಿದ್ದಲ್ಲಿ ಗುಂಡಿ ದೊಡ್ಡದಾಗಿ ಸಂಚಾರಕ್ಕೆ ತೊಡಕಾಗಲಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.ಇನ್ನೇನು ಒಂದೆರಡು ದಿನದಲ್ಲಿ ಶಾಲಾ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕಿರುವುದರಿಂದ, ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.