ಬಂಟ್ವಾಳದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಮರ ಬಿದ್ದು ಮನೆಗಳಿಗೆ ಹಾನಿ

| Published : Jul 07 2024, 01:16 AM IST

ಸಾರಾಂಶ

ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಬೆಳಗ್ಗೆ ೩.೬ ಮೀಟರ್‌ ಇದ್ದುದು, ಸಂಜೆಯ ವೇಳೆಗೆ ೩.೬ ಮೀಟರ್‌ಗೆ ಏರಿದೆ ಎಂದು ಬಂಟ್ವಾಳ ತಹಸೀಲ್ದಾರರ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ ಟಬಂಟ್ವಾಳ ತಾಲೂಕಿನಲ್ಲಿ ಶನಿವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೆಲ್ಯಪಲ್ಕೆ ಎಂಬಲ್ಲಿ ಯುನೂಸ್ ಎಂಬುವವರ ಮನೆಗೆ ಬೆಳಗ್ಗಿನ ಜಾವದಲ್ಲಿ ಬೀಸಿದ ಗಾಳಿ- ಮಳೆಗೆ ಮರ ಬಿದ್ದು ಭಾಗಶಃ ಹಾನಿ ಆಗಿರುತ್ತದೆ. ಇದೇ ಗ್ರಾಮದ ಅಬ್ದುಲ್ ಖಾದ‌ರ್ ಎಂಬವರ ಮನೆ ಗಾಳಿ- ಮಳೆಗೆ ಭಾಗಶಃ ಹಾನಿಗೀಡಾಗಿದೆ.

ಶನಿವಾರ ಬೆಳಗ್ಗೆ ಬೀಸಿದ ಬಿರುಗಾಳಿಯ ಪರಿಣಾಮ ಅಂಗಡಿ ಮುಂಗಟ್ಟುಗಳ ಮೇಲ್ಬಾವಣಿಯ ಶೀಟ್‌ಗಳು ಹಾರಿ ಹೋದ ಘಟನೆ ನಡೆದಿದೆ. ಬೆಳಗ್ಗೆ ಸುಮಾರು 9.30 ರ ಹೊತ್ತಿಗೆ ಜೋರಾದ ಗಾಳಿ ಬೀಸಿದ್ದು, ಖಾದರ್ ಇಕ್ರಾ ಅವರಿಗೆ ಸೇರಿದ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ಅಳವಡಿಸಿರುವ ಶೀಟ್‌ಗಳು ಹಾರಿ ಹೋಗಿದ್ದು, ಅದರ ವಿಡಿಯೋ ದೃಶ್ಯಗಳು ಸೆರೆಯಾಗಿವೆ. ಅದೃಷ್ಟವಶಾತ್‌ ಯಾರಿಗೂ ಅಪಾಯವಾಗಿಲ್ಲ.

ವೀರಕಂಭ ಗ್ರಾಮದ ಬಾಯಿಲ ಎಂಬಲ್ಲಿ ಕಲ್ಯಾಣಿ ಎಂಬವರ ಮನೆ ಗೋಡೆ ಕುಸಿದು ಬಿದ್ದು ಹಾನಿಯಾಗಿದೆ. ಕುರಿಯಾಳ ಗ್ರಾಮದ ಕುರಿಯಾಳ ಪಡುಎಂಬಲ್ಲಿ ಉಗ್ಗಪ್ಪ ಪೂಜಾರಿ ಎಂಬವರ ಮನೆಯ ಪಕ್ಕದ ಕೊಟ್ಟಿಗೆ ಹಾನಿಯಾಗಿದೆ. ಪೆರ್ನೆಯ ಸೀತಾ ನಾಯ್ಕ, ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಗೀಡಾಗಿದೆ.

ಕೊಲ್ನಾಡು ಗ್ರಾಮದ ಮಜಲು ಎಂಬಲ್ಲಿ ರಾಮಣ್ಣನಾಯಕ್ ರವರ ಮನೆಗೆ ಮರ ಬಿದ್ದು ಭಾಗಶ: ಹಾನಿಯಾಗಿರುತ್ತದೆ. ಇರ್ವತ್ತೂರು ಗ್ರಾಮದ ನವೀನ್ ಮೂಲ್ಯ ಎಂಬುವರ ದನದ ಹಟ್ಟಿಗೆ ಹಾನಿ ಆಗಿದೆ. ಇದ್ಕಿದು ಗ್ರಾಮದ ಶೀನ ಎಂಬವರ ಮನೆಯ ಶೌಚಾಲಯದ ಮೇಲೆ ಮರ ಬಿದ್ದು ಹಾನಿಯಾಗಿದೆ. ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಬೆಳಗ್ಗೆ ೩.೬ ಮೀಟರ್‌ ಇದ್ದುದು, ಸಂಜೆಯ ವೇಳೆಗೆ ೩.೬ ಮೀಟರ್‌ಗೆ ಏರಿದೆ ಎಂದು ಬಂಟ್ವಾಳ ತಹಸೀಲ್ದಾರರ ಪ್ರಕಟಣೆ ತಿಳಿಸಿದೆ.