ಸಾರಾಂಶ
ಭಟ್ಕಳ: ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಾಧಾರಣ ಮಳೆ ಇದ್ದರೂ ಸಂಜೆ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು.
ಕಳೆದೊಂದು ವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬುಧವಾರ ಬೆಳಗಿನ ಜಾವದಿಂದಲೇ ಮಳೆಯ ಆರ್ಭಟ ಶುರುವಾಗಿತ್ತು. ಬುಧವಾರ ವ್ಯಾಪಕ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿದ್ದರೆ ಹೊಳೆ, ಕೆರೆ, ಬಾವಿ, ನದಿಗಳು ಭರ್ತಿಯಾಗಿ ತುಂಬಿ ತುಳುಕುತ್ತಿರುವುದು ಕಂಡು ಬಂತು.ರಂಗಿನಕಟ್ಟೆ ಮತ್ತು ಸಂಶುದ್ದೀನ ವೃತ್ತದಲ್ಲಿ ಮಳೆ ನೀರು ಹರಿದು ಹೋಗಲು ಗಟಾರ ಬಿಡಿಸಿಕೊಟ್ಟಿದ್ದರಿಂದ ಮಳೆ ನೀರು ಶೇಖರಣೆಯಾಗಿರಲಿಲ್ಲ. ಗ್ರಾಮಾಂತರ ಭಾಗದಲ್ಲಿ ಮಳೆಗಾಲ ಆರಂಭವಾಗಿ 15 ದಿನ ಕಳೆದರೂ ಈವರೆಗೆ ಗಟಾರದ ಹೂಳು ತೆಗೆಯುವ ಕೆಲಸ ಆರಂಭಿಸಿಲ್ಲ. ಗಟಾರದ ಹೂಳು ತೆಗೆಯಿಸದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಇದರಿಂದ ಸಂಚರಿಸುವ ಜನರು ಮತ್ತು ವಾಹನಗಳಿಗೆ ತೊಂದರೆ ಆಗುತ್ತಿದೆ. ಬೆಳಿಗ್ಗೆ ಹೋದ ವಿದ್ಯುತ್ ಸಂಜೆಯ ವೇಳೆಗೆ ಬಂದಿದ್ದರಿಂದ ಜನರು ತೊಂದರೆ ಅನುಭವಿಸುವಂತಾಯಿತು. ಹದವಾಗಿ ಮಳೆ ಬೀಳುತ್ತಿರುವುದರಿಂದ ತಾಲೂನಾದ್ಯಂತ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ. ಕೆಲವು ಕಡೆ ಬೀಜ ಬಿತ್ತನೆ ಕಾರ್ಯ ಆರಂಭವಾಗಿದ್ದರೆ, ಇನ್ನು ಕೆಲವು ಕಡೆ ಬೀಜ ಬಿತ್ತನೆಗೆ ತಯಾರಿ ನಡೆಸಿದ್ದಾರೆ. ಅಡಕೆ ಬೆಳೆಗೆ ಕೊಳೆ ರೋಗ ತಗುಲದಂತೆ ಔಷಧಿ ಸಿಂಪರಣೆ ಕಾರ್ಯ ನಡೆಯುತ್ತಿದೆ. ಮೂರು ದಿನಗಳ ಕಾಲ ಭಾರೀ ಮಳೆಯಾಗುತ್ತದೆಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದರಿಂದ ತಾಲ್ಲೂಕಿನಾದ್ಯಂತ ತೀವ್ರ ನಿಗಾ ಇಡಲಾಗಿದೆ. ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಮುಗ್ದಂ ಕಾಲೋನಿಯ ಸಫಾ ಸ್ಟ್ರೀಟಿನ ಮೊಹ್ದಮ್ ಅಲ್ತಾಪ್ ಖಲೀಪಾ ಎನ್ನುವವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ.
ಭಟ್ಕಳ ಮುಗ್ದಂ ಕಾಲೋನಿಯಲ್ಲಿ ಭಾರೀ ಮಳೆಗೆ ಕಂಪೌಂಡ್ ಕುಸಿದಿರುವುದು.