ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯವು 77 ಹೆಕ್ಟೇರ್ ಪ್ರದೇಶದಲ್ಲಿ ಪೂರ್ಣಗೊಂಡಿದೆ. ಹಾಗೆಯೇ ಬತ್ತ ಸಸಿಮಡಿ ಕಾರ್ಯ ಆರಂಭವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ತಿಳಿಸಿದ್ದಾರೆ.ಮೇ ತಿಂಗಳಲ್ಲಿ 138 ಮಿ.ಮೀ.ವಾಡಿಕೆ ಮಳೆಗೆ 280 ಮಿ.ಮೀ. ಮಳೆಯಾಗಿದ್ದು, ಶೇ.102 ರಷ್ಟು ಮಳೆಯಾಗಿತ್ತು. ಜೂನ್ ತಿಂಗಳಲ್ಲಿ 534 ಮಿ.ಮೀ. ವಾಡಿಕೆ ಮಳೆಗೆ 435 ಮಿ.ಮೀ. ಮಳೆಯಾಗಿದ್ದು, ಶೇ.18 ರಷ್ಟು ಮಳೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸೋಮಸುಂದರ ಅವರು ಮಾಹಿತಿ ನೀಡಿದ್ದಾರೆ.
ಜನವರಿಯಿಂದ ಇಲ್ಲಿಯವರೆಗಿನ ವಾಡಿಕೆ ಮಳೆ 786 ಮಿ.ಮೀ. ಆಗಿದ್ದು, ಈ ಬಾರಿ 775 ಮಿ.ಮೀ. ಮಳೆಯಾಗಿದ್ದು, ಶೇ. 4 ರಷ್ಟು ಮಾತ್ರ ಮಳೆ ಕಡಿಮೆಯಾಗಿದೆ.ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಯಲ್ಲಿದ್ದು, ಜಿಲ್ಲೆಯಲ್ಲಿ ಬತ್ತದ ಸಸಿಮಡಿ ಕಾರ್ಯವು ಪ್ರಗತಿಯಲ್ಲಿರುತ್ತದೆ, ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ನಾಟಿ ಕಾರ್ಯಕೈಗೊಳ್ಳಲಾಗುತ್ತದೆ. ಮುಸುಕಿನ ಜೋಳದ ಬಿತ್ತನೆ ಕಾರ್ಯವು ಪ್ರಾರಂಭಗೊಂಡಿದ್ದು, ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 2171 ಕ್ವಿಂಟಾಲ್ ಬತ್ತ ಮತ್ತು 41 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿ ಹೊಂದಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ದಿನಾಂಕದವರೆಗೆ ಒಟ್ಟು 1552 ಕ್ವಿಂಟಾಲ್ ಬತ್ತ ಹಾಗೂ 2.4 ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜಾಗಿದೆ, ಒಟ್ಟಾರೆ ಇಲ್ಲಿಯವರೆಗೆ 833.96 ಕ್ವಿಂಟಾಲ್ ಬತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.ಹಾಲಿ ಮಡಿಕೇರಿ ತಾಲೂಕಿನಲ್ಲಿ ಒಟ್ಟು 20 ಕ್ವಿಂಟಾಲ್ ದಾಸ್ತಾನು ಇದ್ದು, ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ: 05 ಕ್ವಿಂ, ನಾಪೋಕ್ಲು: 05 ಕ್ವಿಂ, ಭಾಗಮಂಡಲ: 5 ಕ್ವಿಂ, ಹಾಗೂ ಸಂಪಾಜೆ: 5 ಕ್ವಿಂ.ಗಳು. ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 239.13 ಕ್ವಿಂಟಾಲ್ ದಾಸ್ತಾನು ಇದ್ದು, ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ: 80 ಕ್ವಿಂ, ಶನಿವಾರಸಂತೆ: 62.31 ಕ್ವಿಂ, ಹಾಗೂ ಕೊಡ್ಲಿಪೇಟೆ: 96.82 ಕ್ವಿಂ.ಗಳು, ಕುಶಾಲನಗರ ತಾಲೂಕಿನಲ್ಲಿ ಒಟ್ಟು 159.72 ಕ್ವಿಂಟಾಲ್ ದಾಸ್ತಾನು ಇದ್ದು ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ: 137.97 ಕ್ವಿಂ, ಸುಂಟಿಕೊಪ್ಪ: 21.75 ಕ್ವಿಂ.ಗಳು, ವಿರಾಜಪೇಟೆ ತಾಲೂಕಿನಲ್ಲಿ ಒಟ್ಟು 98 ಕ್ವಿಂಟಾಲ್ ದಾಸ್ತಾನು ಇದ್ದು ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ: 56.75 ಕ್ವಿಂ, ಅಮ್ಮತ್ತಿ: 41.25 ಕ್ವಿಂ.ಗಳು, ಪೊನ್ನಂಪೇಟೆ ತಾಲೂಕಿನಲ್ಲಿ ಒಟ್ಟು 202.75 ಕ್ವಿಂಟಾಲ್ ದಾಸ್ತಾನು ಇದ್ದು ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ: 93.75 ಕ್ವಿಂ, ಹುದಿಕೇರಿ: 47.5 ಕ್ವಿಂ, ಬಾಳೆಲೆ: 30.5 ಕ್ವಿಂ ಹಾಗೂ ಶ್ರೀಮಂಗಲ: 31 ಕ್ವಿಂ.ಗಳು ದಾಸ್ತಾನು ಇರುತ್ತದೆ. ಜಿಲ್ಲೆಯಲ್ಲಿ ಒಟ್ಟು 716.6 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇರುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.