ನಾಪೋಕ್ಲು ಹೋಬಳಿಯಲ್ಲಿ ಬಿರುಸಿನ ಮಳೆ

| Published : Jun 18 2025, 12:38 AM IST

ಸಾರಾಂಶ

ನಾಪೋಕ್ಲು ಹೋಬಳಿ ವ್ಯಾಪ್ತಿ ಗಾಳಿ ಸಹಿತ ಬಿರುಸಿನಿಂದ ಮಳೆ ಸುರಿಯಿತು. ಮರಗಳು ಮುರಿದು ಬಿದ್ದು ಹಾನಿ ಸಂಭವಿಸಿರುವುದು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಗಾಳಿ ಸಹಿತ ಬಿರುಸಿನಿಂದ ಮಳೆ ಸುರಿಯಿತು.

ಅಲ್ಲಲ್ಲಿ ಮರಗಳು ಮುರಿದು ಬಿದ್ದ ಪರಿಣಾಮ ಮನೆಗಳಿಗೆ ಹಾನಿ ಸಂಭವಿಸಿದಲ್ಲದೆ ಹೋಬಳಿ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಡಿತಗೊಂಡಿದೆ.

ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದ ನಬೀಶ ಅವರ ವಾಸದ ಮನೆಗೆ ರಾತ್ರಿ ಭಾರೀ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಸೋಮವಾರ ರಾತ್ರಿ ಬಿದ್ದ ಮರದಿಂದಾಗಿ ಮನೆಯ ಚಾವಣಿಗೆ ಅಳವಡಿಸಿದ 5 ಸಿಮೆಂಟ್ ಶೀಟ್ ಹುಡಿಯಾಗಿರುವುದಲ್ಲದೆ ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕಕ್ಕಬೆ -ಕುಂಜಿಲ ಗ್ರಾಮದ ನಿವಾಸಿ ಕೆ.ಎಂ ಮರಿಯಮ್ಮ ಅವರ ವಾಸದ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ.

ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಕುಂಬಳಗಾಳು ಗ್ರಾಮದ ನಿವಾಸಿ ಕಲ್ಲೆಂಗಡ ಗಿರೀಶ್ ಎಂಬುವರ ತೋಟದ ಲೈನ್ ಮನೆಯ ಮೇಲೆ ಸೋಮವಾರ ರಾತ್ರಿ ಭಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ.

ಮನೆ ಸಮೀಪದ ತೋಟದಲ್ಲಿದ್ದ ಭಾರಿ ಗಾತ್ರದ ಕಾಡು ಬೇವು ಮರ ಗಾಳಿ ಮಳೆಗೆ ಮುರಿದು ಬಿದ್ದು ಛಾವಣಿ ಹಾಗೂ ಮನೆಯೊಳಗಡೆಯಿದ್ದ ಪರಿಕರಗಳಿಗೆ ಭಾರಿ ನಷ್ಟ ಸಂಭವಿಸಿದೆ.

ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ನಾಪೋಕ್ಲು ಹೋಬಳಿಯ ಕುಂಜಿಲ ಗ್ರಾಮದ ಕೆ.ಎಂ ಮರಿಯಮ್ಮ ಎಂಬವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ಸ್ಥಳಕ್ಕೆ ಗ್ರಾಮ ಲೆಕ್ಕಿಗೆ ಶರ್ಮಿಳಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಾಪೋಕ್ಲು - ಕಲ್ಲು ಮೊಟ್ಟೆ ಸಂಪರ್ಕ ರಸ್ತೆಯ ಮೇಲೆ ಕಾವೇರಿ ನೀರು ಹರಿಯುತ್ತಿದ್ದು ಸಂಪರ್ಕ ಸ್ಥಗಿತಗೊಂಡಿದ್ದು ಮಳೆ ಮುಂದುವರೆದರೆ ನಾಪೋಕ್ಲು - ಮೂರ್ನಾಡು ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆಗಳು ಇದೆ.

ಸಮೀಪದ ನಾಲಡಿಯಲ್ಲಿ 24 ಗಂಟೆಯಲ್ಲಿ 192.4 ಮಿಲಿ ಮೀಟರ್ ದಾಖಲೆ ಮಳೆಯಾಗಿದೆ. ನಾಲಡಿ ಗ್ರಾಮದಲ್ಲಿ ಇದುವರೆಗೆ ಒಟ್ಟು 68.81 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 19.48 ಇಂಚು ಮಳೆಯಾಗಿತ್ತು.

ಸಮೀಪದ ನಲಜಿ ಗ್ರಾಮದಲ್ಲಿ ಒಂದೇ ದಿನ 3.20 ಇಂಚು ಮಳೆಯಾಗಿದೆ. ಗ್ರಾಮದಲ್ಲಿ ವರ್ಷದ ಆರಂಭದಿಂದ ಇದುವರೆಗೆ 63.55 ಇಂಚು ಮಳೆ ಸುರಿದಿದೆ. ದೊಡ್ಡಪುಲಿಕೋಟು ಗ್ರಾಮದಲ್ಲಿ 5.50 ಇಂಚು ಮಳೆಯಾಗಿದ್ದರೆ ವಿ ಬಾಡಗ ಗ್ರಾಮದಲ್ಲಿ 4.88 ಇಂಚು ಮಳೆಯಾಗಿದೆ. ವಿ ಬಾಡಗ ಗ್ರಾಮದಲ್ಲಿ ಇದುವರೆಗೆ64.08 ಇಂಚು ಮಳೆಯಾಗಿದೆ.

ಭಾಗಮಂಡಲಕ್ಕೆ ಇದುವರೆಗೆ 83 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 27 ಇಂಚು ಮಳೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 56 ಇಂಚು ಹೆಚ್ಚು ಮಳೆಯಾಗಿದೆ. ತಲಕಾವೇರಿಯಲ್ಲಿ ಒಂದು ದಿನದಲ್ಲಿ ಎಂಟು ಇಂಚು ದಾಖಲೆ ಮಳೆ ಸುರಿದಿದೆ. ಭಾಗಮಂಡಲ ಸೇರಿದಂತೆ ವಿವಿಧೆಡೆ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಮಳೆ ಬಿರುಸು ಹೆಚ್ಚಿದರೆ ವಿವಿಧೆಡೆ ರಸ್ತೆ ಸಂಚಾರ ಕಡಿತಗೊಳ್ಳುವ ಆತಂಕ ಎದುರಾಗಿದೆ.