ಸಾರಾಂಶ
ತಾಲೂಕಿನಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಸೋಮವಾರ ಬೆಳಗಿನಜಾವದ ೨೪ ಗಂಟೆಗಳಲ್ಲಿ ೭೮.೫ ಮಿ.ಮೀ. ಮಳೆಯಾಗಿದೆ.
ಸಿದ್ದಾಪುರ: ತಾಲೂಕಿನಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಸೋಮವಾರ ಬೆಳಗಿನಜಾವದ ೨೪ ಗಂಟೆಗಳಲ್ಲಿ ೭೮.೫ ಮಿ.ಮೀ. ಮಳೆಯಾಗಿದೆ. ಈವರೆಗೆ ೭೩೧.೨ ಮಿ.ಮೀ. ಮಳೆಯಾಗಿದೆ.ಭಾನುವಾರ ದೊಡ್ಮನೆಯ ಗಣಪತಿ ಬೀರಾ ಹಸ್ಲರ್ ಎನ್ನುವವರ ವಾಸದ ಮನೆಯ ಚಾವಣಿ ಕುಸಿದು ಅಂದಾಜು ₹೪೦ ಸಾವಿರ ಹಾನಿಯಾಗಿದೆ. ಸೋಮವಾರ ಹಾರ್ಸಿಕಟ್ಟಾದ ಕಾನಕೊಪ್ಪ ಮಜರೆಯ ಹಸೀನಾ ಅಲ್ಲಾಬಕ್ಷಸಾಬ್ ಅವರ ವಾಸದ ಪಕ್ಕ ಮನೆಯ ಹಿಂದಿನ ರಸ್ತೆಗೆ ಅಡ್ಡಲಾಗಿ ಕಟ್ಟಲಾದ ತಡೆಗೋಡೆ ಕುಸಿದು ಮನೆಯ ಸಿಮೆಂಟ್ ಶೀಟ್ ಹಾಗೂ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಅಂದಾಜು ₹೮೦ ಸಾವಿರ ಹಾನಿಯಾಗಿದೆ. ಬಾಳಗೋಡ ಗ್ರಾಮದ ಈಶ್ವರ ಕೆರಿಯಾ ನಾಯ್ಕ ಅವರ ವಾಸ್ತವ್ಯದ ಮನೆಯ ಚಾವಣಿ ಹಾಗೂ ಗೋಡೆ ಕುಸಿದು ₹೪೫ ಸಾವಿರ ಹಾನಿಯಾಗಿದೆ. ಅವರ ಕುಟುಂಬಕ್ಕೆ ಅರಣ್ಯ ಸಮಿತಿ ಸಭಾಭವನದಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯಾದಗಿ ಗ್ರಾಮದ ಕೃಷ್ಣಮೂರ್ತಿ ಸುಬ್ರಾಯ ಭಟ್ಟ ಅವರ ವಾಸ್ತವ್ಯದ ಮನೆಯ ಚಾವಣಿ ಮೇಲೆ ಬೃಹತ್ ಗಾತ್ರದ ಮಾವಿನಮರ ಬಿದ್ದು ಅಂದಾಜು ₹೭೦ ಸಾವಿರ ಹಾನಿಯಾಗಿದೆ.
ಪಟ್ಟಣದ ರವೀಂದ್ರನಗರದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಪರಿಣಾಮ ಸಾವಿತ್ರಿ ಅಂಬಿಗ ಅವರ ವಾಸದ ಮನೆಯ ಚಾವಣಿಯ ಹೆಂಚುಗಳಿಗೆ ಅಂದಾಜು ₹೫ ಸಾವಿರ ಹಾನಿಯಾಗಿದೆ.ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಮನೆ ಹಾನಿಯಾಗಿದೆ.