ಸಾರಾಂಶ
ಶಿರಸಿ: ತಾಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ. ಹೆಸ್ಕಾಂ ಇಲಾಖೆಯವರು ಕನಿಷ್ಠ ಸೌಜನ್ಯಕ್ಕಾದರೂ ದೂರವಾಣಿ ಕರೆ ಸ್ವೀಕರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮಲೆನಾಡು ಭಾಗದಲ್ಲಿ ಮಳೆ ಪ್ರಾರಂಭವಾದ ಕೂಡಲೇ ವಿದ್ಯುತ್ ಸಮಸ್ಯೆ ತಲೆದೋರುತ್ತದೆ. ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಬೆಳಕಿನ ದರ್ಶನವೇ ಇಲ್ಲ. ಕೆಲವೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಹೆಸ್ಕಾಂ ಲೈನ್ಮೆನ್ಗಳ ಮೊಬೈಲ್ ಸ್ವಿಚ್ಆಫ್ ಆಗಿದ್ದು, ವಿದ್ಯುತ್ ದುರಸ್ತಿ ಮಾಡುತ್ತಿದ್ದಾರೋ, ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಕಳೆದ ಮೂರು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಇನ್ನೂ ಆನ್ ಆಗದೇ ಇರುವುದಕ್ಕೆ ಸಾರ್ವಜನಿಕರು ಹೆಸ್ಕಾಂ ವಿರುದ್ಧ ಸಿಡಿದೇಳುವಂತಾಗಿದೆ.ತಾಲೂಕಿನ ಮಠದೇವಳ ಗ್ರಾಮದ ಕಮಟಗೇರಿಯ ಮಂಜುನಾಥ ಶಿವಪ್ಪ ನಾಯ್ಕಗೆ ಸೇರಿದ ಎಮ್ಮೆಯ ಮೇಲೆ ವಿದ್ಯುತ್ ತಂತಿ ಬಿದ್ದು ಮೃತಪಟ್ಟಿದೆ. ನೆಗ್ಗು ಗ್ರಾಪಂ ವ್ಯಾಪ್ತಿಯ ಕೊಪ್ಪೆಸರದ ನಾರಾಯಣ ಹೆಗಡೆಗೆ ಸೇರಿದ ಆಕಳು ಹುಲ್ಲು ಮೇಯಲು ಹೋದಾಗ ಎತ್ತರದ ಧರೆಯಿಂದ ಬಿದ್ದು ಮೃತಪಟ್ಟಿದೆ. ಗುರುವಳ್ಳಿ ಗ್ರಾಮದ ಮಂಡೆಮನೆಯ ಗಣಪತಿ ಹೆಗಡೆ ಇವರ ತೋಟದಲ್ಲಿ ಇರುವ ಮನೆಯ ಹಿಂದಿನ ಗೋಡೆ ಕುಸಿದು ₹೧೫ ಸಾವಿರ ಹಾನಿಯಾಗಿದೆ. ಸೋಂದಾ ಗ್ರಾಮದ ಉದಯ ಕರ್ಕೊಳ್ಳಿ ಇವರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಆಲದ ಮರ ಬಿದ್ದು ಅಂದಾಜು ೯೦ ರಿಂದ ೧೦೦ ಅಡಿಕೆ ಮರಗಳಿಗೆ ಹಾನಿಯಾಗಿ, ₹೧೫ ಸಾವಿರ ನಷ್ಟ, ಯಕ್ಕಂಬಿಯ ಶಕುಂತಲಾ ರಾಜು ವಡ್ಡರ ವಾಸ್ತವ್ಯದ ಮನೆಯ ಹಿಂದಿನ ಗೋಡೆ ಕುಸಿದು ಬಿದ್ದು ₹೧೦ ಸಾವಿರ ಹಾನಿಯಾಗಿದೆ.