ಸಾರಾಂಶ
ಜಿಲ್ಲೆಯ ಕೆಲವೆಡೆ ಭಾರಿ ಮಳೆಯಿಂದ ಅವಾಂತರ ಉಂಟಾಗಿದೆ.
ಕಾರವಾರ: ಜಿಲ್ಲೆಯ ಕೆಲವೆಡೆ ಭಾರಿ ಮಳೆಯಿಂದ ಅವಾಂತರ ಉಂಟಾಗಿದೆ. ಭಟ್ಕಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮವಾಗಿ ಮಗುವೊಂದು ಕಾಲುವೆಗೆ ಬಿದ್ದು ಮೃತಪಟ್ಟಿದೆ. ಒಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.ಭಟ್ಕಳದ ಆಝಾದ್ ನಗರದಲ್ಲಿ ತೌಸಿಫ್ ಹಾಗೂ ಅರ್ಜು ದಂಪತಿಯ ಎರಡು ವರ್ಷದ ಮಗು ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದೆ. ಬೆಳಲಖಂಡದ ಮಹಾದೇವ ನಾರಾಯಣ ದೇವಾಡಿಗ (50) ಮಳೆ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.
ಜಂಬೂರಮಠದ ರಾಮಾ ನಾಯ್ಕ ಅವರ ನಿವಾಸದ ಮೇಲೆ ತೆಂಗಿನಮರ ಉರುಳಿ ಹಾನಿ ಉಂಟಾಗಿದೆ. ಚೌಥನೀಯ ಜಟಕೇಶ್ವರ ದೇವಾಲಯದ ಮೇಲೆ ಮರ ಉರುಳಿ ಚಾವಣಿ ಜಖಂಗೊಂಡಿದೆ. ತಾಲೂಕಿನ ವಿವಿಧೆಡೆ ಮರಗಳು ಉರುಳಿವೆ. ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.ದೇವಿಮನೆ ಘಟ್ಟದಲ್ಲಿ ಭಾನುವಾರ ಬೆಳಿಗ್ಗೆ ಗುಡ್ಡ ಕುಸಿತ ಉಂಟಾಗಿ ಲಘು ವಾಹನ ಸಂಚಾರ ಸ್ಥಗಿತಗೊಂಡಿತು. ತೆರವು ಕಾರ್ಯಾಚರಣೆ ಆರಂಭಿಸಿ ಮಧ್ಯಾಹ್ನದ ವೇಳೆಗೆ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ರಸ್ತೆಯಲ್ಲಿ ಭಾರಿ ವಾಹನ ಸಂಚಾರವನ್ನು ಈ ಹಿಂದೆಯೇ ಸ್ಥಗಿತಗೊಳಿಸಲಾಗಿದೆ.
ಹೊನ್ನಾವರ ತಾಲೂಕಿನಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಾಸರಕೋಡಿನ ಅಪ್ಸರಕೊಂಡ ಸಮೀಪದ ವಿಘ್ನೇಶ್ವರ ಆಯಿಲ್ ಮಿಲ್ ಸಮೀಪ ಗುಡ್ಡ ಕುಸಿತವಾಗಿದೆ. ಇದರಿಂದ ಯಾವುದೇ ಹಾನಿ ಉಂಟಾಗಿಲ್ಲ.ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆಯಿಂದ ನಂತರದ 24 ಗಂಟೆಗಳಲ್ಲಿ ಉಂಟಾದ ಮಳೆಯ ವಿವರ ಹೀಗಿದೆ.
ಅಂಕೋಲಾದಲ್ಲಿ 74.3 ಮಿಮೀ, ಭಟ್ಕಳದಲ್ಲಿ 62.5 ಹಳಿಯಾಳ 10.3 ಹೊನ್ನಾವರ 51.2 ಕಾರವಾರ 73.6, , ಕುಮಟಾ 65.5 ಮುಂಡಗೋಡ 6.1 ಸಿದ್ದಾಪುರ 28.2 ಶಿರಸಿ 34.1, ಸೂಪಾ 33.4 ಯಲ್ಲಾಪುರ 27.4 ದಾಂಡೇಲಿಯಲ್ಲಿ 23.3 ಮಿಲಿ ಮೀಟರ್ ಮಳೆ ಸುರಿದಿದೆ.