ಅಪಾಯಕಾರಿ ಡೆಂಘೀ ನಿಯಂತ್ರಣಕ್ಕೆ ಸಹಕರಿಸಿ: ಡಾ.ಎನ್.ಕಾಶಿ

| Published : Jun 04 2025, 01:30 AM IST

ಅಪಾಯಕಾರಿ ಡೆಂಘೀ ನಿಯಂತ್ರಣಕ್ಕೆ ಸಹಕರಿಸಿ: ಡಾ.ಎನ್.ಕಾಶಿ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ನಗರದ ಭಾಗ್ಯಶ್ರೀ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಡೆಂಘೀ ಜಾಗೃತಿ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಪ್ರತಿವರ್ಷ ಮಳೆಗಾಲ ಆರಂಭವಾಯಿತೆಂದರೆ ರೋಗಗಳು ವ್ಯಾಪಿಸಲು ಆರಂಭಿಸುತ್ತವೆ. ಡೆಂಘೀ ಮಲೇರಿಯಂತಹ ರೋಗಗಳು ಸುಲಭವಾಗಿ ಎಲ್ಲೆಡೆ ವ್ಯಾಪಿಸುವುದು ಮಳೆಗಾಲದಲ್ಲಿ. ಆದ್ದರಿಂದ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಡೆಂಘೀ ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ ತಿಳಿಸಿದರು.

ಮಂಗಳವಾರ ನಗರದ ಭಾಗ್ಯಶ್ರೀ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಇಲಾಖೆಯಿಂದ ಹಮ್ಮಿಕೊಂಡ ಡೆಂಘೀ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಪ್ರಕಟಿಸಿದ ಮಾಹಿತಿ ಪತ್ರವನ್ನು ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ ಇಲಾಖೆ ಪ್ರತಿವರ್ಷವೂ ಯಾವುದೇ ರೋಗ ಹರಡದಂತೆ ರೋಗಗಳಿಂದ ಜನರು ತೊಂದರೆಗೀಡಾಗದಂತೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿಶೇವಾಗಿ ರಸ್ತೆಯಲ್ಲಿ ನಿಲ್ಲುವ ನೀರು, ಮನೆಯ ಸುತ್ತಮುತ್ತದ ತಗ್ಗುಗಳಲ್ಲಿ ನಿಲ್ಲುವ ನೀರಿನಿಂದ ಸೊಳ್ಳೆಗಳು ಉತ್ಪತಿಯಾಗಿ ತೊಂದರೆಕೊಡಲು ಆರಂಭಿಸುತ್ತವೆ. ಡೆಂಘೀ ಹರಡುವುದೇ ಸೊಳ್ಳೆಯಿಂದ ಆದ್ದರಿಂದ ಎಲ್ಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ತಾಲೂಕಿನಾದ್ಯಂತ ಡೆಂಘೀ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ, ಕಾಲೇಜು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ವಿಶೇಷ ಮಾರ್ಗದರ್ಶನ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಡೆಂಘೀ ವ್ಯಾಪಿಸದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತ್ ರಾಜ್, ಸಂಜಯ್, ವೆಂಕಟೇಶ್, ಭಾಗ್ಯಶ್ರೀ ಐಟಿಐ ಕಾಲೇಜಿನ ಪ್ರಾಂಶುಪಾಲ ಪುನಿತ್‌ನಾಗ್, ಉಪನ್ಯಾಸಕರಾದ ಸೀತಾಪಟೇಲ್‌, ಹರ್ಷಿಣಿ, ವಿದ್ಯಾ, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.