ಸಾರಾಂಶ
ಶಿಕ್ಷಣ ಎಂಬುದು ಎಲ್ಲಾ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.
ವಿವೇಕ ಯೋಜನೆಯಡಿ ನಿರ್ಮಾಣವಾದ ಶಾಲಾ ಕೊಠಡಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹಿರೇಕೆರೂರುಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣ ಎಂಬುದು ಎಲ್ಲಾ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ತಾವರಗಿ ಗ್ರಾಮದಲ್ಲಿ 2023-24ರಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾದ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದರು. ನಾವೆಲ್ಲಾ ಬಹುತೇಕ ಸರ್ಕಾರಿ ಶಾಲೆಗಳಲ್ಲಿಯೇ ಓದಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸಂಸ್ಕಾರ, ಆಚಾರ ವಿಚಾರ ಇಂದು ನಮ್ಮನ್ನ ದೊಡ್ಡವರನ್ನಾಗಿ ಮಾಡಿದೆ. ಸರ್ಕಾರಿ ಶಾಲೆಗಳನ್ನ ಮಾದರಿ ಶಾಲೆಗಳನ್ನಾಗಿ ಮಾಡುತ್ತೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಮೂಲಭೂತ ಎಲ್ಲಾ ಸೌಕರ್ಯ ಕಲ್ಪಿಸಲಾಗುವುದು. ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕಾಲೇಜು ಕಟ್ಟಡಗಳು ದುರಸ್ತಿ, ಹೊಸ ಕಟ್ಟಡಗಳು, ಅಗತ್ಯವಿರುವ ಲ್ಯಾಬ್ ಗಳು, ಶೌಚಾಲಯ, ಕುಡಿಯುವ ನೀರು ಮೊದಲಾದ ಸಕಲ ಸೌಲಭ್ಯಗಳನ್ನು ಕಲ್ಪಿಸಲು ರೂಪರೇಷ ತಯಾರಿಸಲಾಗಿದೆ. ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು. ಸರ್ಕಾರ ಬಡಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಸುಸಜ್ಜಿತಗೊಳಿಸಲಾಗುತ್ತಿದೆ. ಎಲ್ಲರೂ ನಿಮ್ಮ ಮಕ್ಕಳನ್ನು ತಪ್ಪದೇ ಸರ್ಕಾರಿ ಶಾಲೆಗೆ ಸೇರಿಸಿ ಎಂದರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ, ಕ್ಷೇತ್ರ ಸಮನ್ವಯ ಅಧಿಕಾರಿ ಎನ್. ಸುರೇಶಕುಮಾರ, ಪಿಡಿಒ ಸತೀಶಕುಮಾರ,ಗ್ರಾಪಂ ಅಧಯಕ್ಷ ಈರಪ್ಪ ಗುಬ್ಬೇರ, ಗ್ರಾಪಂ ಮಾಜಿ ಅಧ್ಯಕ್ಷೆ ಲತಾ ಪ್ರಕಾಶ ಸಿತೀಕೊಂಡ, ಗ್ರಾಪಂ ಸದಸ್ಯರಾದ ಶಂಕರಗೌಡ ಅಬಲೂರ, ಬಸವರಾಜ ಜಾಡರ, ಮುಖ್ಯ ಶಿಕ್ಷಕ ಎಸ್.ಎಂ. ಹೊಸಮನಿ. ಎಸ್ಡಿಎಂಸಿ ಉಪಾಧ್ಯಕ್ಷ ಹನುಮಂತಪ್ಪ ಅಜ್ಜಪ್ಪನವರ, ಗ್ರಾಮಸ್ಥರಾದ ಮಹೇಶ ಹೊಸಮನಿ, ಚನ್ನಬಸಪ್ಪ ಅಜ್ಜಪ್ಪನವರ, ಗೊಣೆಪ್ಪ ಕುರುಬರ ಹಾಗೂ ಎಸ್ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.