ಕನಕಗಿರಿ:ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿ ಇರುವ ಚಲುವಾದಿ ಓಣಿಯ ಶಮಿವೃಕ್ಷದ ಕಟ್ಟೆ ಬಳಿ ಠಾಣಾಧಿಕಾರಿ ವಿ. ನಾರಾಯಣ ಅವರ ನೇತೃತ್ವದಲ್ಲಿ ಸೋಮವಾರ ನಡೆದ ದಲಿತ ಸಭೆಯಲ್ಲಿ ಕುಂದು-ಕೊರತೆ ಆಲಿಸಿದರು.
ನಂತರ ಮಾತನಾಡಿದ ಅವರು, ಸಾಂವಿಧಾನಿಕವಾಗಿ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ದೊರೆಯಬೇಕಾದ ಸೌವಲತ್ತುಗಳ ಮಾಹಿತಿ ನೀಡಿದರು. ಅಸ್ಪೃಶ್ಯತೆ, ಕಂದಾಚಾರ ಸೇರಿದಂತೆ ನಾನಾ ಅನಾಚಾರಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಆನಂತರ ಯುವ ಮುಖಂಡ ನೀಲಕಂಠ ಬಡಿಗೇರ ಮಾತನಾಡಿ, ಚಲುವಾದಿ ಓಣಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದು, ಅನೇಕ ಸಮಸ್ಯೆಗಳಿವೆ. ಹಳ್ಳಿಗಳಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ಜಾತಿ ದೌರ್ಜನ್ಯಗಳು ನೆಡೆಯುತ್ತಿವೆ. ಜೂಜು, ಮಟ್ಕಾ, ಇಸ್ಪೀಟ್, ಮದ್ಯ, ಕಳ್ಳತನ ಅಕ್ರಮ ಚಟುವಟಿಕೆ ತಡೆಗಟ್ಟಬೇಕು. ವಾರ್ಡಿನಲ್ಲಿ ವಿದ್ಯಾವಂತರಿದ್ದು, ಹೈಟೆಕ್ ಗ್ರಂಥಾಲಯ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
ಈ ವೇಳೆ ಪರಸಪ್ಪ ಗುಂಡೂರು, ಪಾಂಡುರಂಗ ಬಡಿಗೇರ, ಕನಕಪ್ಪ ಮ್ಯಾಗಡೆ, ಮಲ್ಲಯ್ಯ ನಂದಾಪುರ, ಅಮರೇಶ, ಹನುಮಂತ ಹೋಟೆಲ್, ಬಸವರಾಜ ಅರಳಿಗನೂರು, ತಿಮ್ಮಣ್ಣ ಇದ್ದರು.