ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಸಹಕರಿಸಿ: ಕೆ.ಬಿ.ಕೃಷ್ಣಮೂರ್ತಿ

| Published : Apr 23 2024, 12:45 AM IST

ಸಾರಾಂಶ

ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರನ್ನುಗೆಲ್ಲಿಸುವ ಮೂಲಕ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕು ಎಂದು ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ ಹೇಳಿದರು

ಕನ್ನಡಪ್ರಭ ವಾರ್ತೆ ಪಾವಗಡ

ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರನ್ನುಗೆಲ್ಲಿಸುವ ಮೂಲಕ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕು ಎಂದು ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, ರಾಷ್ಟ್ರದಲ್ಲಿ ಮೋದಿ ಅಲೆ ವ್ಯಾಪಕವಾಗಿದ್ದು, ಅವರ ಜನಪರ ಯೋಜನೆ ಅನುಷ್ಟಾನದ ಮೇರೆಗೆ ಬಿಜೆಪಿ ಪರ ಜನ ನಿಂತಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಕೇಂದ್ರ ಸ್ಪಷ್ಟ ನಿಲುವು ಪ್ರಕಟಿಸಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಸಾಧಕ ಬಾಧಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಜಾರಿಗೆ ತಂದಿದ್ದು, ಇದು ಒಂದು ಆ ವೈಜ್ಞಾನಿಕ ಯೋಜನೆಯಾಗಿದೆ. ಇದರಿಂದ ಕೋಟ್ಯಂತರ ರು. ಸಾಲ ಮಾಡಿ ತೆರಿಗೆ ಮೂಲಕ ಜನರ ಮೇಲೆ ಹೇರಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತದಿಂದ ಲೋಕಸಭೆ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಇಲ್ಲಿನ ಹಟ್ಟಿ ಪ್ರವೇಶದ ವಿಚಾರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿ ಪ್ರಗತಿಗೆ 75 ಲಕ್ಷ ರು. ನೀಡುವುದಾಗಿ ಹೇಳಿದ್ದರೂ ಒಂದು ನೈಯಾಪೈಸೆ ಸಹ ಬಿಡುಗಡೆ ಮಾಡಿಲ್ಲ. ಕಾರಜೋಳರು ಸಂಸದರಾದ ಬಳಿಕ ಈ ಗ್ರಾಮದ ಪ್ರಗತಿಗೆ ವಿಶೇಷ ಒತ್ತು ನೀಡಲಿದ್ದಾರೆ ಎಂದು ಹೇಳಿದರು.

ತಾಲೂಕು ಬಿಜೆಪಿ ಅಧ್ಯಕ್ಷ ರಂಗಣ್ಣ ಮಾತನಾಡಿ, ಅಭಿವೃದ್ಧಿಯಿಂದಾಗಿ ವಿಶ್ವವೇ ಭಾರತದತ್ತ ನೋಡುತ್ತಿದೆ. ಇಡೀ ಭಾರತ ವಿಶ್ವದ ಗುರುವಾಗುವ ಕಾಲ ಹತ್ತಿರದಲ್ಲಿದೆ. ದೇಶದ ಸುಭದ್ರತೆ ಹಾಗೂ ಜನಪರ ಯೋಜನೆ ಜಾರಿಗೆ ಮೋದಿ ನೇತೃತ್ವದ ಬಿಜೆಪಿ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪರ ಹೆಚ್ಚು ಒಲವಿದ್ದು ಹೆಚ್ಚಿನ ಮತಗಳಿಂದ ಕಾರಜೋಳರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಕರೆ ನೀಡಿದರು.

ಹಿರಿಯ ಮುಖಂಡರಾದ ಜಿ.ಟಿ.ಗಿರೀಶ್, ಎಸ್‌.ವಿ.ಗೋವಿಂದಪ್ಪ, ಭೀಮನಕುಂಟೆ ಸತ್ಯಪ್ಪ, ಬಾಲಮ್ಮನಹಳ್ಳಿ ಸೂರ್ಯನಾರಾಯಣ್‌, ಜಿಲ್ಲಾ ಎಸ್‌ಸಿ ಘಟಕದ ಶಿವಕುಮಾರ್‌ ಸಾಕೇಲ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ ಸೀತಾರಾಮ್‌ನಾಯ್ಕ್‌, ಅಲ್ಕುಂದರಾಜ್‌ ಅರಸೀಕೆರೆ, ಕನ್ನಮೇಡಿ ಲೋಕೇಶ್‌, ಮಹಿಳಾ ಘಟಕದ ಸರೋಜಮ್ಮ, ಪದ್ಮಾವತಿ, ಶಾರದಾಬಾಯಿ ಉಪಸ್ಥಿತರಿದ್ದರು.