ಮಹಿಳಾ ಕುಲಕ್ಕೆ ಸ್ಫೂರ್ತಿಯಾಗಿರುವ ಹೇಮರಡ್ಡಿ ಮಲ್ಲಮ್ಮ ಪ್ರೀತಿ, ತ್ಯಾಗ, ಸಹನೆಯ ಸಂಕೇತ ಎಂದು ಮಾಜಿ ಶಾಸಕಿ, ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳಾ ಕುಲಕ್ಕೆ ಸ್ಫೂರ್ತಿಯಾಗಿರುವ ಹೇಮರಡ್ಡಿ ಮಲ್ಲಮ್ಮ ಪ್ರೀತಿ, ತ್ಯಾಗ, ಸಹನೆಯ ಸಂಕೇತ ಎಂದು ಮಾಜಿ ಶಾಸಕಿ, ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರಡ್ಡಿ ಹೇಳಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಹಾಗೂ ರಡ್ಡಿ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಜರುಗಿದ ಹೇಮರಡ್ಡಿ ಮಲ್ಲಮ್ಮ ನ 604ನೆಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಲ್ಲಮ್ಮ ಸದ್ಗುಣಿಯಾಗಿ ಆದರ್ಶದ ಬದುಕು ಬಾಳಿ ದೇವತೆಯ ಸ್ಥಾನ ಪಡೆದು ಪೂಜಿತಗೊಳ್ಳುವ ಮೂಲಕ ಮಹಿಳಾ ಕುಲಕ್ಕೆ ಸ್ಫೂರ್ತಿಯಾಗಿದ್ದಾಳೆ ಎಂದ ಸೌಮ್ಯ ರಡ್ಡಿ, ಮಲ್ಲಮ್ಮನ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅಗತ್ಯತೆಯಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಸಂಸದ ಪಿ.ಸಿ.ಗದ್ಧಿಗೌಡರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನ ಆದರ್ಶಮಯ ಬದುಕು ಜೀವನದ ಸಾರ್ಥಕತೆಗೆ ಪ್ರೇರಣೆಯಾಗಿದೆ. ಮಹಾತ್ಮರು, ಶರಣರ ಜಯಂತಿ ಆಚರಣೆಗಳು ಮನುಕುಲದ ಬದುಕಿಗೆ ಪೂರಕವಾಗಿ ನಡೆಯುತ್ತವೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಭಕ್ತಿ, ಪ್ರೀತಿ, ಸಹಕಾರದ ಸಾಕಾರಮೂರ್ತಿಎನಿಸಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಮಹಿಳಾ ಕುಲದ ದಿಕ್ಸೂಚಿ ಆಗಿದ್ದಾಳೆ ಎಂದು ಹೇಳಿದರು.

ಸದ್ಬೊಧನೆ ನೀಡಿದ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ, ಹೇಮರಡ್ಡಿ ಮಲ್ಲಮ್ಮ ಮನುಕುಲವನ್ನು ಆದರ್ಶದ ಬೆಳಕಿನೆಡೆಗೆ ಕೊಂಡೊಯ್ಯದ ಮಹಾನ್ ಶರಣೆ ಎಂದರು.

ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬೀಳಗಿಯ ಎಂ.ಎನ್. ಪಾಟೀಲ ಮಾತನಾಡಿದರು. ಆರ್.ಎಲ್. ಕಟಗೇರಿ, ಮಲ್ಲಿಕಾರ್ಜುನ ಮೆಳ್ಳಿಗೇರಿ, ಡಿ.ಎಂ. ಫೈಲ್, ಚಂದ್ರಶೇಖರ ಕಾಮಾ, ರಾಮನಗೌಡ ಜಕ್ಕನಗೌಡ್ರ, ಪಂಡಿತ ಮಾಚಾ, ನಾರಾಯಣ ಹಾದಿಮನಿ, ಚಂದ್ರಶೇಖರ ಅರಳಿಮಟ್ಟಿ, ಮಾಲತೇಶ ಅಮಾತೆಪ್ಪನವರ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ದಾನಿಗಳನ್ನು ಸತ್ಕರಿಸಲಾಯಿತು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿ ವೇಮನ ವಚನ ಸುಧೆ ಪ್ರಸ್ತುತಪಡಿಸಿದರು. ಎಸ್.ಟಿ.ಬೆಳಕೊಪ್ಪದ ಸ್ವಾಗತಿಸಿದರು. ಹೇಮರೆಡ್ಡಿ ಮಲ್ಲಮ್ಮ ಸೇವಾ ಸಮಿತಿ ಅಧ್ಯಕ್ಷ ಮಹೇಶ ಕಕರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಸೋನಾ ಕಟಗೇರಿ ಮತ್ತು ಪಾಂಡು ಕಟಗೇರಿ ನಿರೂಪಿಸಿದರು. ನಕುಲ ಬೆಳ್ಳುಬ್ಬಿ ವಂದಿಸಿದರು.

ಕಾರ್ಯಕ್ರಮದ ನಂತರ ಗದಗ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ಕಲಾವಿದರಿಂದ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡಿತು.