ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಕ್ತಿ‌ ಮತ್ತು ತಾಳ್ಮೆಯ ಪ್ರತೀಕವಾಗಿದ್ದು, ಅವರ ಪರಹಿತ ಚಿಂತನೆ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಕ್ತಿ‌ ಮತ್ತು ತಾಳ್ಮೆಯ ಪ್ರತೀಕವಾಗಿದ್ದು, ಅವರ ಪರಹಿತ ಚಿಂತನೆ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಸಮಾಜದ ಸಹಯೋಗದಲ್ಲಿ ಭಾನುವಾರ ಸರಳವಾಗಿ ಏರ್ಪಡಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಲ್ಲಮ್ಮನ ಜೀವನ ಚರಿತ್ರೆ ನಮಗೆ ತಾಳ್ಮೆಯ ಪಾಠವನ್ನು ಕಲಿಸುತ್ತದೆ. ಅವರು ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಿ, ಬದುಕಿಗೆ ಶಕ್ತಿ ತುಂಬಿದ್ದಾರೆ. ಅವರ ಅನುಭವಗಳು, ಪವಾಡಗಳನ್ನು ಕೈಗನ್ನಡಿಯಾಗಿ ಹಿಡಿದು ನಾವು ಮುನ್ನಡೆಯಬೇಕಿದೆ.

ನಮ್ಮ ಪರಂಪರೆ, ನಂಬಿಕೆಗಳೇ ನಮ್ಮ ಅಸ್ಮಿತೆಯಾಗಿದ್ದು, ಇಂತಹ ನಮ್ಮ ನಂಬಿಕೆಗಳ‌ ಮೇಲಿನ ಗಧಾ ಪ್ರಹಾರ ನಿಲ್ಲಬೇಕು ಎಂದ ಅವರು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಮಾದರಿಯಾಗಿರುವ ಮಲ್ಲಮ್ಮನವರ ಜೀವನ ಚರಿತ್ರೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ನಾಗರಾಜ್ ಪರಿಸರ ಇವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನವರು ಮಹಿಳಾ ಕುಲಕ್ಕೆ ಆದರ್ಶಪ್ರಾಯರು. ಅವರ ಅತ್ತೆಯವರು ಎಷ್ಟೇ ಕಿರುಕುಳ ನೀಡುತ್ತಿದ್ದರೂ ಅವರನ್ನು ಗೌರವದಿಂದ ಕಾಣುತ್ತಿದ್ದರು. ಆಕೆಯ ಗಂಡನನ್ನು ಹುಚ್ಚ ಎನ್ನಲಾಗುತ್ತಿದ್ದರೂ, ಆತನೇ ತನ್ನ ಪಾಲಿನ‌‌ ಮಲ್ಲಿಕಾರ್ಜುನ ಎಂದು ಪರಿಗಣಿಸಿ ಬದುಕುತ್ತಾರೆ. ಎಷ್ಟೇ ಕಷ್ಟ ಬಂದರೂ, ತೊಂದರೆಗಳು ಬಂದರೂ, ಸಾಧ್ವಿಮಣಿಯಾಗಿ ಬದುಕುತ್ತಾರೆ. ಸಹನೆ ಇದ್ದರೆ ಏನು ಬೇಕಾದರೂ ಜಯಿಸಬಹುದೆಂಬುದಕ್ಕೆ ಅವರೇ ಸಾಕ್ಷಿ‌ ಎಂದರು.

ಅತ್ತೆಯು ಕೋಪದಿಂದ ನೀಡಿದ ಉರಿಯುವ ಕೆಂಡವನ್ನು ಭಿಕ್ಷುಕನ ಜೋಳಿಗೆಗೆ ಹಾಕಿದಾಗ, ಅದು ಮಲ್ಲಿಕಾರ್ಜುನನ ಕೃಪೆಯಿಂದ ಧಾನ್ಯವಾಗಿ ಮಾರ್ಪಟ್ಟಿತು. ಅಂದಿನಿಂದ ಇವರು ''''''''ಬೆಂಕಿದಾನದ ಮಲ್ಲಮ್ಮ'''''''' ಎಂದೇ ಖ್ಯಾತರಾಗುತ್ತಾರೆ. ಮಲ್ಲಮ್ಮ ದಾನ ನೀಡುವುದರಲ್ಲಿ ಎತ್ತಿದ ಕೈ.‌ ಆಕೆ ತನಗಾಗಿ ಬೇಡದೇ, ಸಮಾಜಕ್ಕಾಗಿ ಬೇಡುತ್ತಾಳೆ. ತನ್ನ ಕಷ್ಟಗಳನ್ನು ಯಾರ ಮುಂದೆಯೂ ಹೇಳುತ್ತಿರಲಿಲ್ಲ. ಸಹಾಯ ಕೇಳಿ ಬಂದವರಿಗೆ ಎಂದಿಗೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ ಎಂದು ಹೇಳಿದರು.

ಗೋವುಗಳು ಹಾಗೂ ಪರಿಸರದ ಬಗ್ಗೆ ತುಂಬಾ ಕಾಳಜಿ‌‌ ಹೊಂದಿದ್ದರು. ಅತ್ಯಂತ ಸರಳತೆಯ ಜೀವನ‌ ನಡೆಸುತ್ತಿದ್ದ ಅವರ ಜೀವನ‌ ಮೌಲ್ಯಗಳನ್ನು ನಾವೆಲ್ಲ‌ ಅಳವಡಿಸಿಕೊಳ್ಳಬೇಕಿದೆ. ಇಂದಿನ‌ ಯುವ ಜನತೆ ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದ ಅವರು, ಜಯಂತಿಗಳಂದು ರಜೆ ನೀಡುವ ಬದಲು ಶಾಲಾ ಕಾಲೇಜುಗಳಲ್ಲಿ ಇಂತಹ ದಾರ್ಶನಿಕರ, ಮಹಾನ್ ವ್ಯಕ್ತಿಗಳ ತತ್ವಗಳು, ಆದರ್ಶಗಳು ಮತ್ತು ಜೀವನ ಚರಿತ್ರೆ ಕುರಿತು ಪ್ರಬಂಧ, ಭಾಷಣ ಇತರೆ ಸ್ಪರ್ಧೆಗಳನ್ನು‌ ನಡೆಸುವ ಮೂಲಕ‌ ಮಹನೀಯರ ಬಗ್ಗೆ ಮಕ್ಕಳಿಗೆ ತಿಳಿಸಬೇಕೆಂದು ಮನವಿ ಮಾಡಿದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಆಚರಣೆಗಿಂತ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಜಯಂತಿಗಳು ಸಾರ್ಥಕವಾಗುತ್ತದೆ. ಮಲ್ಲಮ್ಮನವರು ಕೇವಲ ಸ್ತ್ರೀ ಕುಲಕ್ಕೆ ಮಾತ್ರವಲ್ಲ, ಇಡೀ‌ ಮನುಕುಲಕ್ಕೇ ಮಾದರಿಯಾಗಿದ್ದಾರೆ. ಹೆಣ್ಣು ಗಂಡು ಕುಟುಂಬದಲ್ಲಿ ಹೇಗೆ ಬದುಕಬೇಕೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ ಹೊನ್ನಲಿಂಗಪ್ಪ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನವರು

ಅಸಾಧಾರಣ ಹೆಣ್ಣುಮಗಳು. ಕಷ್ಟ-ಕಾರ್ಪಣ್ಯಗಳ ನಡುವೆಯೂ ಪರಶಿವನ ಪಾದವನ್ನೇ ನಂಬಿ, ಶೋಷಣೆ ಮತ್ತು ಅವಮಾನಗಳನ್ನು ಮೆಟ್ಟಿ ನಿಂತ ಆದರ್ಶ ಮಹಿಳೆ. ತಮಗೆ ಬಂದೊದಗಿದ ಕಷ್ಟಗಳನ್ನೆಲ್ಲಾ ಸಹಿಸಿದ ಅವರು ತಂಗಳು ತಿಂದು, ದನಗಳನ್ನು ಕಾದು ಬದುಕುತ್ತಾರೆ. ದುಶ್ಚಟಗಳಿಗೆ ದಾಸನಾಗಿದ್ದ ಮೈದುನ ವೇಮನನ ಮನಸ್ಸನ್ನು ಪರಿವರ್ತಿಸಿ, ಅವನನ್ನು ಸನ್ಮಾರ್ಗಕ್ಕೆ ತರುತ್ತಾರೆ‌ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಉಮೇಶ್ , ಸಮಾಜದ ಮುಖಂಡರು ಹಾಜರಿದ್ದರು.